ಉಡುಪಿ: ಆ್ಯಪ್ ಡೌನ್ಲೋಡ್ ಮಾಡಿಸಿ ಲಕ್ಷಾಂತರ ರೂ. ವಂಚನೆ

ಉಡುಪಿ, ಮಾ 05: ಅನಾಮಧೇಯ ಆ್ಯಪ್ ಡೌನ್ಲೋಡ್ ಮಾಡಿದ ವ್ಯಕ್ತಿಯೊಬ್ಬರ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆಯಾದ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲ ನಿವಾಸಿ ಉಮಾಕಾಂತ್ ಸಿಂಗ್ ಅವರಿಗೆ ಮಾ.4ರಂದು ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಸಂದೇಶವೊಂದು ಬಂದಿತ್ತು. ಈ ಹಿನ್ನೆಲೆ ಸಂದೇಶ ಬಂದ ಸಂಖ್ಯೆಗೆ ಉಮಾಕಾಂತ್ ಅವರು ಕರೆ ಮಾಡಿದ್ದಾರೆ. ಆ ಬಳಿಕ ಆರೋಪಿಯು ಅದಕ್ಕೆ ಸಂಬಂಧಿಸಿದ ಅರ್ಜಿಯೊಂದನ್ನು ಭರ್ತಿ ಮಾಡಬೇಕಿದೆ. ಅದಕ್ಕಾಗಿ ಆ್ಯಪ್ ಒಂದನ್ನು ಡೌನ್ಲೋಡ್ ಮಾಡುವಂತೆ ಹೇಳಿದ್ದಾನೆ.

ಆರೋಪಿಯ ಮಾತಿನಂತೆ ಉಮಾಕಾಂತ್ ಅವರು ಆ್ಯಪ್ ಡೌನ್ಲೋಡ್ ಮಾಡಿದ್ದು, ಅದರಲ್ಲಿ ಅರ್ಜಿ ತುಂಬಿಸುವ ವೇಳೆಗೆ ಅವರ ಖಾತೆಯಿಂದ 1,69,950 ರೂ.ಗಳು ಅಪರಿಚಿತ ವ್ಯಕ್ತಿಯ ಖಾತೆಗೆ ವರ್ಗಾವಣೆಗೊಂಡಿದೆ. ಇನ್ನು ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top