ಬಚ್ಚಿಟ್ಟಿದ್ದ ಮೊಬೈಲ್ ನುಂಗೆ ಬಿಟ್ಟ ಕೈದಿ; ಆಮೇಲೇನಾಯ್ತು? ಈ ಸ್ಟೋರಿ ಓದಿದ್ರೆ ಶಾಕ್ ಆಗ್ತೀರಾ!

ಶಿವಮೊಗ್ಗ : ಕೇಂದ್ರ ಕಾರಾಗೃಹದಲ್ಲಿ ಬಂಧಿಯಾಗಿದ್ದ ಕೈದಿಯೊಬ್ಬ ಮೇಲಾಧಿಕಾರಿಗಳ ತಪಾಸಣೆ ವೇಳೆ ಮೊಬೈಲ್ ನುಂಗಿದ್ದ ಆಘಾತಕಾರಿ ಘಟನೆ ಜಿಲ್ಲೆಯ ಸೋಗಾನೆಯ ಜೈಲಿನಲ್ಲಿ ನಡೆದಿದೆ.

ಶಿವಮೊಗ್ಗ ರಾಜೀವ್‌ಗಾಂಧಿ ಬಡಾವಣೆಯ ನಿವಾಸಿ. ಸೋಗಾನೆಯ ಕೇಂದ್ರ ಕಾರಗೃಹದ ಕೈದಿ ಪರಶುರಾಮ ಅಲಿಯಾಸ್ ಚಿಂಗಾರಿ ಎಂಬಾತ ಮೊಬೈಲ್ ನುಂಗಿದ್ದ ವ್ಯಕ್ತಿ.

ಪರಶುರಾಮ ಮಾರ್ಚ್ 28ರಂದು ಹೊಟ್ಟೆನೋವಿನಿಂದ ಒದ್ದಾಡುತ್ತಿದ್ದ. ಕೂಡಲೇ ಆತನನ್ನು ಜೈಲಿನ ಸಿಬ್ಬಂದಿ ಕಾರಾಗೃಹದೊಳಗಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಹೊಟ್ಟೆನೋವು ಜಾಸ್ತಿ ಆಗುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನನ್ನು ಪರೀಕ್ಷಿಸಿದ ವೈದ್ಯರು ಆತ ಕಲ್ಲಿನಂತಹ ವಸ್ತು ನುಂಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದರು.

ಏಪ್ರಿಲ್ 1ರಂದು ಜೈಲಿನ ವೈದ್ಯಾಧಿಕಾರಿಗಳ ಸೂಚನೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಬಳಿಕ ಏಪ್ರಿಲ್ 3ರಂದು ಬೆಂಗಳೂರು ಕೇಂದ್ರ ಕಾರಾಗೃಹದ ಹಿರಿಯ ಮುಖ್ಯ ವೈದ್ಯಾಧಿಕಾರಿ ಪರೀಕ್ಷಿಸಿ ಏಪ್ರಿಲ್ 6ರಂದು ವಿಕ್ಟೋರಿಯಾ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದರು. ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಪತ್ತೆಯಾಗಿದೆ.

ಕಾರಾಗೃಹಗಳಲ್ಲಿ ನಿಷೇಧಿತ ವಸ್ತುಗಳನ್ನ ಬಳಕೆ ಮಾಡೋಕೆ ಕೈದಿಗಳು ಒಂದಲ್ಲಾ ಒಂದು ಸರ್ಕಸ್ ಮಾಡ್ತಾರೆ. ಆದ್ರೆ ಪರಶುರಾಮ ತೆಗೆದುಕೊಂಡಿದ್ದ ರಿಸ್ಕ್ ಊಹೆಗೂ ನಿಲುಕ್ಕದ್ದು. ಸದ್ಯ ಒಂದು ಕೇಸ್ನಲ್ಲಿ ಶಿಕ್ಷೆ ಅನುಭವಿಸ್ತಿದ್ದ ಪರಶುರಾಮನ ಮೇಲೆ ಇದೀಗ ತುಂಗಾನಗರ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತೊಂದು ಕೇಸ್ ಹಾಕಿದ್ದಾರೆ.

Scroll to Top