ಉಡುಪಿ, ಆ.05: ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ ಸೋಮವಾರ ನಡೆದಿದೆ.

ಶಿರ್ವದಿಂದ ಉಡುಪಿಗೆ ಬರುತ್ತಿದ್ದ ನವೀನ್ ಬಸ್ ಉಡುಪಿ ಹಳೆ ತಾಲೂಕು ಕಚೇರಿ ಬಳಿ ಬರುವಾಗ ಯವತಿಯೋರ್ವಳು ಅಸ್ವಸ್ಥಳಾಗಿ ಬಸ್ಸಿನಲ್ಲೇ ವಾಂತಿ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿ ತಲುಪಿದ್ದು ಕೂಡಲೇ ಬಸ್ಸಿನ ಚಾಲಕ ಶಶಿಕಾಂತ್ ಬಸ್ಸನ್ನು ಪಕ್ಕದ ಟಿ ಎಮ್ ಎ ಪೈ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದತ್ತ ಕೊಂಡೊಯ್ದಿದ್ದು, ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದಾರೆ.

ಅಲ್ಲದೆ ಯುವತಿಯ ಮನೆಯವರಿಗೆ ಮಾಹಿತಿ ನೀಡಿ ಮನೆಯವರು ಬರುವ ತನಕ ಯುವತಿಗೆ ಚಿಕಿತ್ಸೆಗೆ ಸಹಕಾರ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಬಸ್ ಚಾಲಕ ಶಶಿಕಾಂತ್ ಮತ್ತು ನಿರ್ವಾಹಕ ಸಲೀಂ ಅವರ ಮಾನವೀಯ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.