ಶಿರ್ವದ ಜ್ಯುವೆಲ್ಲರಿ ಶಾಪಿಗೆ ಕನ್ನ ಹಾಕಿದ ಕಳ್ಳರಿಗೆ ಬಲೆ‌ ಬೀಸಿದ‌ ಶಿರ್ವ ಪೋಲೀಸರು!

ಶಿರ್ವ ಹಾಗೂ ಮೂಡಬಿದ್ರಿಯ ಜ್ಯುವೆಲ್ಲರಿಗಳಲ್ಲಿ ನಡೆದ ಚಿನ್ನಾಭರಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಅಂತರ್ ರಾಜ್ಯ ಚೋರರನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ರಾಜ್ಯದ ದಿಂಡಿಗಲ್ ಜಿಲ್ಲೆಯ ಶನಾಬೆಲ್ಲಾ(45), ಮುಹಮ್ಮದ್ ಅಲಿ(32), ಅಶುರ್ ಅಲಿ(32) ಹಾಗೂ ಗಣೇಶ್ ಕುಮಾರ್ (40) ಬಂಧಿತ ಆರೋಪಿಗಳು. ಆರೋಪಿಗಳಿಂದ ಸುಮಾರು 1.49 ಲಕ್ಷ ರೂ. ಮೌಲ್ಯದ 28.882 ಗ್ರಾಂ ತೂಕದ ಚಿನ್ನದ ಗಟ್ಟಿ ಮತ್ತು 1.17ಲಕ್ಷ ರೂ. ಮೌಲ್ಯದ 26 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಶಿರ್ವ ಪೇಟೆಯ ಕೃಪಾ ಜ್ಯುವೆಲ್ಲರ್ಸ್‌ಗೆ ಜೂ.6 ರಂದು ಮಧ್ಯಾಹ್ನ ಗ್ರಾಹಕರ ಸೋಗಿನಲ್ಲಿ ಇಬ್ಬರು ಅಪರಿಚಿತರು ಆಗಮಿಸಿದ್ದರು. ಹಾಗೂ ಅಂಗಡಿಯ ಕೆಲಸದವರ ಗಮನ ಬೇರೆಗೆ ಸೆಳೆಯುವಂತೆ ಮಾಡಿ 1.49 ಲಕ್ಷ ರೂ. ಮೌಲ್ಯದ 28.799 ಗ್ರಾಂ ತೂಕದ ಚಿನ್ನದ ನೆಕ್ಲೇಸ್ ಕಳವು ಮಾಡಿಕೊಂಡು ಹೋಗಿದ್ದರು.

ಜೂ.9ರಂದು ಸಿಸಿ ಕ್ಯಾಮೆರಾ ಪರಿಶೀಲಿಸಿ ದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿತ್ತು. ಈ ಬಗ್ಗೆ ವಿವೇಕಾನಂದ ಆಚಾರ್ಯ ನೀಡಿದ ದೂರಿನಂತೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಇದೇ ಆರೋಪಿಗಳ ವಿರುದ್ಧ ಮೂಡಬಿದ್ರಿಯ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

You cannot copy content from Baravanige News

Scroll to Top