ಉಡುಪಿ: ಪಾನ್ ಅಪ್ಡೇಟ್ ಹೆಸರಿನಲ್ಲಿ ವಂಚನೆ; ಪ್ರಕರಣ ದಾಖಲು..!!

ಉಡುಪಿ: ಮೊಬೈಲ್ ಗೆ ಬಂದ ಲಿಂಕ್ ವೊಂದನ್ನು ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು 1 ಲಕ್ಷ ರೂ. ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯಲ್ಲಿ ವರದಿಯಾಗಿದೆ.

ಸುಧಾಕರ ಕಾಂಚನ್ ಇವರು ಹೆಚ್.ಡಿ.ಎಫ್.ಸಿ ಬ್ಯಾಂಕ್, ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ಮಾರ್ಚ್ 04ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಪಾನ್‌ಕಾರ್ಡ್‌ ಅಪ್ಡೇಟ್ ಮಾಡಲು ಸಂದೇಶ ಕಳುಹಿಸಿದ್ದ.

ಸಂದೇಶದಲ್ಲಿರುವ ಲಿಂಕ್‌ನ್ನು ಬ್ಯಾಂಕ್‌ನಿಂದ ಕಳುಹಿಸಿರುವುದಾಗಿದೆ ಎಂದು ನಂಬಿ ಸದ್ರಿ ಲಿಂಕ್‌ನಲ್ಲಿ ವಿವರವನ್ನು ಅಪ್ಡೇಟ್‌ ಮಾಡಿದ್ದಾರೆ. ಬಳಿಕ ಅವರ ಖಾತೆಯಿಂದ ರೂ.1,00,000/- ಹಣ ಆನ್ ಲೈನ್ ಮುಖೇನ ವರ್ಗಾವಣೆಗೊಂಡಿರುವುದು ಬೆಳಕಿಗೆ ಬಂದಿದೆ. ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಪಿರ್ಯಾದುದಾರರನ್ನು ವಂಚಿಸಿ ಮೋಸದಿಂದ ಹಣ ವರ್ಗಾವಣೆ ಮಾಡಿರುವುದು ತಿಳಿದುಬಂದಿದೆ.

ಈ ಬಗ್ಗೆ ಸೆನ್‌ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.

You cannot copy content from Baravanige News

Scroll to Top