ವಿಷಕಾರಿ ಸೊಪ್ಪು ಸೇವಿಸಿ ನಾಲ್ಕು ಜಾನುವಾರು ಗಂಭೀರ, ಒಂದು ಹಸು ಸಾವು

ಉಳ್ಳಾಲ: ಸೊಪ್ಪು ತಿಂದ ಎರಡು ಹಸುಗಳು, ಮೂರು ಕರುಗಳು ಅಸೌಖ್ಯಕ್ಕೀಡಾಗಿ ಗಂಭೀರ ಸ್ಥಿತಿ ತಲುಪಿದ್ದು, ಇದರಲ್ಲಿ ಒಂದು ಹಸು ಸಾವನ್ನಪ್ಪಿ ಉಳಿದ ನಾಲ್ಕು ಜಾನುವಾರುಗಳು ಗಂಭೀರ ಸ್ಥಿತಿಗೆ ತಲುಪಿದ ಘಟನೆ ಸೋಮೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಂಡೋಳಿ ಎಂಬಲ್ಲಿ ಸಂಭವಿಸಿದೆ.

ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಗಜೇಂದ್ರ ಕುಮಾರ್ ಪಿ.ಕೆ ನೇತೃತ್ವದಲ್ಲಿ ಚಿಕಿತ್ಸೆ ನಡೆಸಲಾಗುತ್ತಿದೆ.

ಕೃಷಿಕ ಸಂಜೀವ ಪೂಜಾರಿ ಎಂಬವರಿಗೆ ಸೇರಿದ ಮನೆಯಲ್ಲಿ ಘಟನೆ ಸಂಭವಿಸಿದೆ. ಮಾ.8 ರ ಮಧ್ಯಾಹ್ನ ಮನೆಯವರು ಕರಿ ಬಸ್ರಿ ತಳಿಯ ಸೊಪ್ಪು ಜಾನುವಾರುಗಳು ಮಲಗುವ ಬೆಡ್ಡಿಂಗ್ ಗೆಂದು ಹಾಕಲಾಗಿದೆ. ಆದರೆ ಹಸುಗಳೆಲ್ಲಾ ಅದನ್ನೇ ತಿಂದ ನಂತರ ಅಸ್ವಸ್ಥತೆಗೆ ಒಳಗಾಗಿದೆ.

ಸಂಜೆ ನಂತರ ಹಸುಗಳು ಕೆಲವು ಮಲಗಿದ್ದಲ್ಲೇ ಬಿದ್ದರೆ, ಇನ್ನುಳಿದವು ಕಾಲುಗಳನ್ನು ನೆಲಕ್ಕೆ ಹೊಡೆಯುವ ರೀತಿಯಲ್ಲಿ ವರ್ತಿಸುತಿತ್ತು. ಇದನ್ನು ಗಮನಿಸಿದ ಮನೆಮಂದಿ ಕೋಟೆಕಾರು ಪಶುವೈದ್ಯರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಅವರು ಸಹಾಯಕ ಆಯುಕ್ತರ ತುರ್ತು ಸಭೆಯಲ್ಲಿದ್ದ ಕಾರಣ ಸಹಾಯಕರನ್ನು ಸ್ಥಳಕ್ಕೆ ಕಳುಹಿಸಿ ಪ್ರಾಥಮಿಕ ಚಿಕಿತ್ಸೆಯನ್ನು ಕೊಡಿಸಿದ್ದರು.

ಇಂದು ಮುಂಜಾನೆ ವೇಳೆಗೆ ತಿಂದ ಎಲೆಗಳ ವಿಷಾಹಾರ ಹಸುವಿನ ಇಡಿ ದೇಹಕ್ಕೆ ಪಸರಿ ನಸುಕಿನ ಜಾವ ಒಂದು ಹಸು ಸಾವನ್ನಪ್ಪಿತ್ತು. ಇನ್ನುಳಿದ ಹಸುಗಳು ಗಂಭೀರ ಸ್ಥಿತಿಗೆ ತಲುಪಿದ್ದವು. ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮನೆಮುಂದೆ ಜಮಾಯಿಸಿದ್ದು, ಪಶುವೈದ್ಯರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು. ಬಳಿಕ ಸ್ಥಳಕ್ಕಾಗಮಿಸಿದ ಕೋಟೆಕಾರು ಪಶು ವೈದ್ಯಾಧಿಕಾರಿ ಡಾ. ಚಂದ್ರಹಾಸ್ ನೇತೃತ್ವದಲ್ಲಿ ಚಿಕಿತ್ಸೆಯನ್ನು ಆರಂಭಿಸಲಾಯಿತು. ತಲಪಾಡಿ ಪಶು ವೈದ್ಯಾಧಿಕಾರಿ ಡಾ. ರಚನಾ ಅವರೂ ಸ್ಥಳಕ್ಕಾಗಮಿಸಿ ಗಂಭೀರ ಸ್ಥಿತಿಯಲ್ಲಿರುವ ಜಾನುವಾರುಗಳಿಗೆ ಚಿಕಿತ್ಸೆ ನಡೆಸುತ್ತಿದ್ದಾರೆ.

You cannot copy content from Baravanige News

Scroll to Top