ಅಕ್ರಮ ಗೋ ಸಾಗಾಟ : ಮೂರು ಹಸುಗಳ ರಕ್ಷಣೆ- ಆರೋಪಿಗಳು ಪರಾರಿ..!

ಕುಂದಾಪುರ : ವಾಹನದಲ್ಲಿ ಅಕ್ರಮವಾಗಿ ಮೂರು ಗೋವುಗಳನ್ನು ತುರುಕಿಸಿಕೊಂಡು ಸಾಗಿಸುತ್ತಿರುವುದನ್ನು ನಸುಕಿನ ಹೊತ್ತು ಪತ್ತೆ ಹಚ್ಚಿ ರಕ್ಷಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ತೆಂಕಬೆಟ್ಟುವಿನಲ್ಲಿ ಈ ಘಟನೆ ನಡೆದಿದೆ.

ವಾಹನ ಒಂದರಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನನುಸರಿಸಿ ಕಾರ್ಯಾಚರಣೆ ನಡೆಸಿದ ಕೋಟ ಪೊಲೀಸರು ಮೂರು ಹಸುಗಳನ್ನು ರಕ್ಷಿಸಿದ್ದಾರೆ.

ಹಸುಗಳನ್ನು ಏಸ್‌ ವಾಹನದಲ್ಲಿ ಹಿಂಸಾತ್ಮಕವಾಗಿ ತುಂಬಿಸಿಕೊಂಡು ಮಧುವನ ಮಾರ್ಗವಾಗಿ ಸಾಗಿಸುತ್ತಿದ್ದ ಐವರ ತಂಡದ ಬಗ್ಗೆ ಸುಳಿವು ಸಿಕ್ಕಿ ಸ್ಥಳೀಯ ಯುವಕರ ತಂಡ ತತ್‌ ಕ್ಷಣವೇ ಕೋಟ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದೆ. ಅದೇ ಸಂದರ್ಭದಲ್ಲಿ ಗ್ರಾಮ ಗಸ್ತಿನಲ್ಲಿದ್ದ ಎಎಸ್‌ಐ ಗಣೇಶ್‌ ಪೈ ಹಾಗೂ ಪೊಲೀಸ್‌ ಸಿಬಂದಿ ಪ್ರಸನ್ನ ಮಾಲಾಡಿ ಅವರು ಪೊಲೀಸ್‌ ಜೀಪ್‌ನಲ್ಲಿ ಏಸ್‌ ವಾಹನವನ್ನು ಬೆನ್ನಟ್ಟಿದಾಗ ಆರೋಪಿಗಳು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.

ಕೋಟ ಪೊಲೀಸರು ಮೂರು ಹಸುಗಳನ್ನು ರಕ್ಷಿಸಿ, ಕೃತ್ಯಕ್ಕೆ ಬಳಸಿದ್ದ ವಾಹನವನ್ನು ವಶಪಡಿಸಿಕೊಂಡಿದ್ದು ಪ್ರಕರಣ ದಾಖಲು ಮಾಡಿದ್ದಾರೆ. .

You cannot copy content from Baravanige News

Scroll to Top