ಅನ್ನಭಾಗ್ಯ, ಗೃಹಜ್ಯೋತಿ ಇಂದಿನಿಂದ ಜಾರಿ

ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ ಶಕ್ತಿ ಯೋಜನೆ ಜಾರಿಯಾಗಿ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಅಂತೆಯೇ ಇಂದಿನಿಂದ (ಜು.1) ಅನ್ನಭಾಗ್ಯ ಮತ್ತು ಗೃಹಜ್ಯೋತಿ ಯೋಜನೆಗೆ ಚಾಲನೆ ದೊರೆಯಲಿದೆ.

ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರದಾರರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ 10 ಕೆಜಿ ಅಕ್ಕಿ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಆದರೆ ಈಗ ಅಗತ್ಯ ಪ್ರಮಾಣದ ಅಕ್ಕಿ ಸಿಕ್ಕಿಲ್ಲ. ಹೀಗಾಗಿ 5 ಕೆಜಿ ಅಕ್ಕಿ ಹಾಗೂ ಬಾಕಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡುವುದಾಗಿ ಸರ್ಕಾರ ತಿಳಿಸಿದೆ.

ಪ್ರತಿ ಕೆಜಿಗೆ 34 ರೂಪಾಯಿ ಲೆಕ್ಕದಲ್ಲಿ ತಲಾ ಒಬ್ಬರಿಗೆ 170 ರೂಪಾಯಿ ಸಿಗಲಿದೆ. ಬಿಪಿಎಲ್ ಕಾರ್ಡ್ದಾರರ ಅಕೌಂಟ್‌ಗೆ ದುಡ್ಡು ಜಮೆ ಮಾಡಲು ಸರ್ಕಾರ ನಿರ್ಧರಿಸಿದೆ. ಅನ್ನಭಾಗ್ಯದ ದುಡ್ಡು ಬಿಪಿಎಲ್ ಕಾರ್ಡ್ದಾರರ ಖಾತೆಗೆ ಬೀಳಲು ಷರತ್ತುಗಳು ಅನ್ವಯವಾಗಲಿದೆ.

ಗೃಹಜ್ಯೋತಿ ಯೋಜನೆಯಡಿ ಪ್ರತಿ ಮನೆಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡಲಾಗುವುದು ಎಂದು ಕಾಂಗ್ರೆಸ್ ಘೋಷಿಸಿತ್ತು. ಇಂದಿನಿಂದ ಈ ಯೋಜನೆಯೂ ಆರಂಭವಾಗಲಿದೆ. ಈ ಯೋಜನೆ ಸೌಲಭ್ಯಕ್ಕಾಗಿ ಇಲ್ಲಿವರೆಗೆ ಒಟ್ಟು 86 ಲಕ್ಷ ಜನರು ಅರ್ಜಿ ಸಲ್ಲಿಸಿದ್ದಾರೆ. ಇನ್ನೂ 1.15 ಕೋಟಿಗೂ ಅಧಿಕ ಜನರು ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಕೆ ಮಾಡಬೇಕಾಗಿದೆ. ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ ನಿಗದಿಯಾಗಿಲ್ಲ.

ಜುಲೈ ತಿಂಗಳಲ್ಲಿ ಬಳಸಿದ ವಿದ್ಯುತ್ ಆಗಸ್ಟ್ 1 ರಿಂದ ನೀಡುವ ಬಿಲ್‌ಗೆ ಸೇರ್ಪಡೆಯಾಗುವ ರೀತಿಯಲ್ಲಿ ಯೋಜನೆ ಜಾರಿಯಾಗಲಿದೆ.

Baravanige News

Translate »

You cannot copy content from Baravanige News

Scroll to Top