ಪಡುಬಿದ್ರಿ ಕಾಡಿಪಟ್ಟ ಪ್ರದೇಶದಲ್ಲಿ ತೀವ್ರಗೊಂಡ ಕಡಲ್ಕೊರೆತ..!

ಪಡುಬಿದ್ರಿ: ಕರಾವಳಿಯಲ್ಲಿ ಸುರಿದ ಬಿರುಸಿನ ಮಳೆ, ಗಾಳಿಗೆ ಪಡುಬಿದ್ರಿ ಕಾಡಿಪಟ್ಟ ಪ್ರದೇಶದಲ್ಲಿ ಜು.3ರಂದು ಕಡಲ್ಕೊರೆತ ಉಂಟಾಗಿದೆ.

ಕಡಲ ತಡಿಯ ಉಸುಕಿನಲ್ಲಿ ಉಂಟಾಗಿರುವ ಭಾರಿ ಗುಳಿಯ ಪರಿಣಾಮ ಪಡುಬಿದ್ರಿ ಬೀಚ್ ಪಕ್ಕದ ಕಾಡಿಪಟ್ಟ ಶಂಕರ ಎಂ. ಅಮೀನ್‌ ಅವರ ಮನೆ ಬಳಿ ಸುಮಾರು 50 ಮೀ. ಭಾಗದಲ್ಲಿ ಕಡಲ್ಕೊರೆತ ಉಂಟಾಗಿದೆ.



ಕಡಲಿನ ಅಬ್ಬರದ ತೆರೆಗಳಿಗೆ ಈಗಾಗಲೇ ಸುಮಾರು 4 ತೆಂಗಿನ ಮರಗಳು, ಪಡುಬಿದ್ರಿ ಅಭಿವೃದ್ಧಿ ಕಾಮಗಾರಿಯ ಭಾಗವಾಗಿರುವ ಒಂದು ವಿದ್ಯುತ್‌ ಕಂಬ ನೆಲಕಚ್ಚಿದೆ.

ಇಲ್ಲಿನ ಅಭಿವೃದ್ಧಿ ಕಾಮಗಾರಿಯ ವೇಳೆ ಹಾಸಲಾಗಿದ್ದ ಹಾಲೋ ಬ್ಯಾಕ್ಸ್ ಅಂಗಳದ ಭಾಗ, ಹಲವು ತೆಂಗಿನ ಮರಗಳು ಹಾಗೂ ಕಾಡಿಪಟ್ಟ ಕೈರಂಪಣಿ ಫಂಡ್‌ಗೆ ಹಾನಿಯಾಗಿದೆ.

ಗೋದಾಮು ಒಳಗೆ ಇದ್ದ ಬೆಲೆಬಾಳುವ ದೋಣಿಗಳ ಸಹಿತ ಸಾಮಾನು ಸರಂಜಾಮುಗಳನ್ನು ಫಂಡಿನ ಸದಸ್ಯರು ತೆರವುಗೊಳಿಸಿದ್ದಾರೆ.

ಕಳೆದ ಬಾರಿ ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್ ಮುತುವರ್ಜಿಯಲ್ಲಿ ಪಡುಬಿದ್ರಿ ಮುಖ್ಯ ಬೀಚ್ ಹಾಗೂ ಕಾಡಿಪಟ್ಟಗಳಲ್ಲಿ ನಿರ್ಮಿಸಲಾದ ತಡೆಗೋಡೆಯ ಕಾಮಗಾರಿಯ ನಡುವೆ ಖಾಸಗಿ ವ್ಯಕ್ತಿಯೊಬ್ಬರ ಮನವಿಯಂತೆ ಸಮುದ್ರ ತೀರ ಪ್ರವೇಶಕ್ಕಾಗಿ ಕೈಬಿಡಲಾಗಿದ್ದ ಸುಮಾರು 50 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲೇ ಈ ಕಡಲ್ಕೊರೆತ ಕಾಣಿಸಿಕೊಂಡಿದೆ.



2-3 ವರ್ಷಗಳಿಂದೀಚೆಗೆ ನಡೆಸಲಾಗಿರುವ ತಡೆಗೋಡೆ ಕಾಮಗಾರಿಗಳ ಕುರಿತು ಗುತ್ತಿಗೆದಾರರಿಗೆ ಸರಕಾರದ ವತಿಯಿಂದ ಬಾಕಿಯಿರುವ ಹಣದ ಪಾವತಿಯಾಗಿಲ್ಲ.

ಪ್ರಾಕೃತಿಕ ವಿಕೋಪ ನಿಧಿಯಿಂದಲೂ ಈ ತಡೆಗೋಡೆ ಮತ್ತು ತುರ್ತು ಕಾಮಗಾರಿಗಳನ್ನು ಹೊರತುಪಡಿಸಿರುವುದು ಸರಿಯಲ್ಲ ಎಂದು ಘಟನಾ ಸ್ಥಳಕ್ಕೆ ಭೇಟಿ ನೀಡಿದ ಕೆಪಿಸಿಸಿ ಕೋ ಆರ್ಡಿನೇಟರ್, ಮಾಜಿ ತಾಲೂಕು ಪಂಚಾಯತ್ ಸದಸ್ಯ ನವೀನ್ ಚಂದ್ರ ಜೆ. ಪಡುಬಿದ್ರೆ ಗ್ರಾಮ ಲೆಕ್ಕಾಧಿಕಾರಿ ಮಥಾಯಿ, ಪಿ.ಎಂ. ಹಾಗೂ ಗ್ರಾಮ ಸಹಾಯಕ ಜಯರಾಮ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ನೀಡಿದ್ದಾರೆ.

ಕಾಪು ತಹಸಿಲ್ದಾರ್ ಶ್ರೀನಿವಾಸ ಮೂರ್ತಿ ಅವರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ ಗ್ರಾಮ ಲೆಕ್ಕಾಧಿಕಾರಿಗಳ ವರದಿಯ ಮೇರೆಗೆ ಬಂದರು ಮತ್ತು ಮೀನುಗಾರಿಕಾ ಇಲಾಖಾ ಅಧಿಕಾರಿಗಳನ್ನು ಸಂಪರ್ಕಿಸಿ ಈ ಪ್ರದೇಶದಲ್ಲಿ ತುರ್ತು ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರು.

Baravanige News

Translate »

You cannot copy content from Baravanige News

Scroll to Top