ಮಂಗಳೂರು: ನಗರದ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮುಳಿಹಿತ್ಲುವಿನ ಅಂಗಡಿಯೊಂದರಲ್ಲಿ ಕೆಲಸಕ್ಕಿದ್ದ ಯುವಕನೋರ್ವ ಬರ್ಬರವಾಗಿ ಕೊಲೆಯಾಗಿದ್ದಾನೆ.
ಜಗ್ಗು (35) ಕೊಲೆಯಾದ ಯುವಕನಾಗಿದ್ದು, ಆರೋಪಿ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಬೆಳಗ್ಗೆ ತನ್ನ ಸ್ಟೋರಿನಲ್ಲಿ ಕೆಲಸಕ್ಕಿದ್ದ ಜಗ್ಗುವನ್ನು ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡುವ ಉದ್ದೇಶದಿಂದ ಬೆಂಕಿ ಕೊಟ್ಟು ಸುಟ್ಟು ನಂತರ ಸಾಕ್ಷಿ ನಾಶ ಮಾಡುವ ಹಾಗೂ ಪ್ರಕರಣದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಅಪರಾಹ್ನ ಅಂಗಡಿಯ ಸುತ್ತಮುತ್ತಲಿನ ಸಾರ್ವಜನಿಕರಿಗೆ ವಿದ್ಯುತ್ ಸ್ಪರ್ಶವಾಗಿರುವುದಾಗಿ ತೌಸಿಫ್ ಹೇಳಿದ್ದಾನೆ.
ಕೂಡಲೇ ಸ್ಥಳೀಯರು ಜಗ್ಗುವನ್ನು ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಕರಕೊಂಡು ಹೋದಾಗ ಆದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಕರಣ ದಾಖಲು ಮಾಡಿಕೊಂಡ ಪಾಂಡೇಶ್ವರ ಪೊಲೀಸರು ಕೂಲಂಕೂಷವಾಗಿ ತನಿಖೆಯನ್ನು ಆರಂಭಿಸಿದ್ದಾರೆ. ಆ ಸಂದರ್ಭ ಪರಿಸರದ ಸಾರ್ವಜನಿಕರನ್ನು ವಿಚಾರಿಸಿದಾಗ ಜಗ್ಗುವನ್ನು ಸ್ಟೋರ್ ಮಾಲಿಕ ತೌಸಿಫನೇ ಕೊಲೆ ಮಾಡಿದ್ದರ ಬಗ್ಗೆ ಬಲವಾದ ಸಾಕ್ಷ್ಯಗಳು ದೊರೆತಿದ್ದು, ಆರೋಪಿ ತೌಸಿಫ್ ಹುಸೈನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಘಟನೆ ಬೆಳಕಿಗೆ ಬಂದ ಬಳಿಕ ಸ್ಥಳದಲ್ಲಿ ಬಿಗು ವಾತಾವರಣ ನಿರ್ಮಾಣವಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಬಿಗಿ ಪೊಲೀಸ್ ಬಂದೋಬಸ್ತನ್ನು ಏರ್ಪಡಿಸಿದ್ದಾರೆ.