ಉಡುಪಿ: ಜಿಲ್ಲೆಯ ಹಲವೆಡೆ ಇಳೆಗೆ ತಂಪೆರೆದ ಮಳೆರಾಯ

ಉಡುಪಿ, ಆ.1: ಕಳೆದ ಕೆಲವು ದಿನಗಳಿಂದ ಮಾಯವಾಗಿದ್ದ ಮಳೆ ಶುಕ್ರವಾರ ಮಧ್ಯಾಹ್ನದಿಂದ ಉಡುಪಿ, ಕಾಪು, ಬ್ರಹ್ಮಾವರ ತಾಲೂಕಿದ್ಯಂತ ಮತ್ತೆ ಸುರಿಯಲಾರಂಭಿಸಿದ್ದು ಇಳೆಯನ್ನು ತಂಪಾಗಿಸಿದೆ.

ಆಷಾಢದಲ್ಲಿ ಮಳೆಯ ಕೊರತೆ ಯಿಂದಾಗಿ ವಿಪರೀತ ಸೆಕೆ ಕಂಡು ಬಂದಿದ್ದು ಕೆಲವೆಡೆಗಳಲ್ಲಿ ನೀರು ಬಹುತೇಕ ಆಳಕ್ಕೆ ಇಳಿದಿದೆ. ನೀರಿಲ್ಲದೇ ಭತ್ತದ ಗದ್ದೆಗಳು ಒಣಗಲಾರಂಭಿಸಿ ಕೃಷಿ ಹಾನಿಯ ಭೀತಿ ಎದುರಾಗಿತ್ತು. ಮತ್ತೊಂದೆಡೆ ಮಳೆ ಕಡಿಮೆಯಾಗಿದ್ದರಿಂದ ರೋಗಗಳೂ ಹೆಚ್ಚಿದ್ದವು.

ಈ ಬಾರಿ ಆಶ್ಲೇಷಾ ಮಳೆ ಕೈಕೊಟ್ಟಿದ್ದು ಕೃಷಿಕರಲ್ಲಿ ನಿರಾಸೆ ಮೂಡಿಸಿತ್ತು. ನಿನ್ನೆಯಿಂದ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗುತ್ತಿದ್ದು ಕೃಷಿಕರು ಮತ್ತು ಜನಸಾಮಾನ್ಯರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

Scroll to Top