ಮಂಜನಾಡಿಯ ಯುವಕನಿಗೆ ಒಲಿದ 25 ಕೋಟಿ ರೂ ಲಾಟರಿ; ಅಸಲಿ ಸ್ಟೋರಿ ಇಲ್ಲಿದೆ..!

ಉಳ್ಳಾಲ, ಸೆ 21: ಮಂಜನಾಡಿ ನಿವಾಸಿ ಯುವಕನಿಗೆ ಕೇರಳದ 25 ಕೋಟಿ ರೂ. ಲಾಟರಿ ಒಲಿದಿರುವ ಸುದ್ಧಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆ, ಯುವಕ ಸಂಪರ್ಕಕ್ಕೆ ಸಿಕ್ಕಾಗ ಅಸಲಿಯತ್ತು ಹೊರಬಿದ್ದಿದೆ.

ಮಂಜನಾಡಿ ಮೊಂಟೆಪದವು ನಿವಾಸಿ ಆಸೀಫ್ ಎಂಬವರಿಗೆ ಎರಡು ದಿನಗಳ ಹಿಂದಷ್ಟೇ ಡ್ರಾ ಆದ ಕೇರಳದ ರೂ.25 ಕೋಟಿ ಲಾಟರಿ ಒಲಿದಿರುವುದಾಗಿ ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ನಡೆಸುತ್ತಿರುವ ಆಸೀಫ್, ನಿನ್ನೆ ಊರಿಗೆ ಕಾರಿನಲ್ಲಿ ಬರುತ್ತಿದ್ದಾಗ ಮೊಬೈಲ್ ಗೆ ಕರೆಗಳ ಮೇಲೆ ಕರೆಗಳು ಬರುತ್ತಲೇ ಇತ್ತು. ಕರೆ ಸ್ವೀಕರಿಸಿದಾಗ ಶುಭಾಷಯಗಳ ಸರಮಾಲೆಯೇ ಸಿಗುತಿತ್ತು. ಹೆಚ್ಚು ವಿಚಾರಿಸುತ್ತಿದ್ದಂತೆಯೇ, ರೂ. 25 ಕೋಟಿ ಲಾಟರಿ ಟಿಕೆಟ್ ಒಲಿದಿರುವುದಾಗಿ ಸ್ನೇಹಿತರೊಬ್ಬರು ತಿಳಿಸಿದ್ದಾರೆ‌. ಲಾಟರಿಯೇ ಖರೀದಿಸದ ನನಗೆ ಹೇಗೆ ಒಲಿಯುವುದು ಎಂದು ತನ್ನಷ್ಟಕ್ಕೆ ಮೌನವಾಗಿದ್ದಾರೆ. ಹೀಗೆ ರಾತ್ರಿವರೆಗೂ ಕರೆಗಳು ನಿರಂತರವಾಗಿ ಬರುತ್ತಲೇ ಇದ್ದು, ಆಸೀಫ್ ಅವರು ನಿಜವಾಗಿಯೂ ಲಾಟರಿ ಒಲಿಯುತ್ತಿದ್ದರೆ ಮೊಬೈಲ್ ಸ್ವಿಚ್ ಆಫ್ ನಡೆಸಿ ಪೊಲೀಸ್ ಠಾಣೆಯಲ್ಲಿ ಕೂರಬೇಕಿತ್ತು, ಅನ್ನುತ್ತಾರೆ.

ಈ ಕುರಿತು ಆಸೀಫ್ ಸ್ನೇಹಿತರೊಬ್ಬರಲ್ಲಿ ಹೆಚ್ಚು ವಿಚಾರಿಸಿದಾಗ , ವಾಟ್ಸ್ ಅಪ್ ಮೂಲಕ ಲಿಂಕ್ ಬರುತ್ತಿದ್ದು, ಅದನ್ನು ಬಳಸಿ ತಮ್ಮ ಸ್ನೇಹಿತರ ಭಾವಚಿತ್ರ ಹಾಗೂ ಹೆಸರನ್ನು ಹಾಕಿ ಮಜಾ ತೆಗೆದುಕೊಳ್ಳುವ ಪರಿಪಾಠ ನಡೆಯುತ್ತಿದೆ. ಅಲ್ಲದೆ ಕೇರಳದ ಲಾಟರಿ ಗಳಿಸಿದವರ ಜತೆಯೂ ಭಾವಚಿತ್ರ ಅಂಟಿಸಿ ಸಾಮಾಜಿಕ ಜಾಲತಾಣದಲ್ಲಿ ರವಾನಿಸುತ್ತಿರುವ ವಿಚಾರವೂ ಬೆಳಕಿಗೆ ಬಂದಿದೆ. ಈ ಹಿಂದೆಯೂ ಜಿಲ್ಲೆಯ ವಿವಿದೆಡೆ ಇಂತಹ ಪ್ರಕರಣಗಳು ನಡದಿರುವುದಾಗಿಯು ತಿಳಿದುಬಂದಿದೆ.

Scroll to Top