ಕಾರ್ಕಳ: ಇತಿಹಾಸದಲ್ಲಿಯೇ ಮೊದಲ ಬಾರಿಗೆ ತೀವ್ರ ಬರ

ಕಾರ್ಕಳ: ಪಶ್ಚಿಮ ಘಟ್ಟಗಳ ಸಾಲಿನ ತಳದಲ್ಲಿ, ರಾಜ್ಯದ ಚಿರಾಪುಂಜಿ ಖ್ಯಾತಿಯ ಆಗುಂಬೆಯ ಮಡಿಲಿನಲ್ಲಿ ಇರುವ ಕಾರ್ಕಳ ತಾಲೂಕು ತೀವ್ರ ಬರಪೀಡಿತ ತಾಣಗಳ ಪಟ್ಟಿಯಲ್ಲಿ ಸೇರಿದ್ದು, ತಾಲೂಕಿನ ಇತಿಹಾಸದಲ್ಲೇ ಇಂತಹ ಮೊದಲ ಬಾರಿಗೆ ವಿಪ್ಲವ ಕಾಣಿಸಿಕೊಂಡಿದೆ.

ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ದತ್ತಾಂಶದ ಪ್ರಕಾರ 2015ರಿಂದ 2021ರ ಅವಧಿಯಲ್ಲಿ ಐದು ವರ್ಷ ಉಡುಪಿ ಜಿಲ್ಲೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ದಾಖಲಾಗಿತ್ತು. ಕರ್ನಾಟಕ ಚಿರಾಪುಂಜಿ ಖ್ಯಾತಿಯ ಆಗುಂಬೆಯ ಬಳಿಕ ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಕಾರ್ಕಳ ತಾಲೂಕಿನಲ್ಲಿ ಸುರಿದ ಬಳಿಕವೇ ಇತರೆಡೆಗೆ ವಿಸ್ತರಣೆಗೊಳ್ಳುತ್ತಿತ್ತು. ಆದರೀಗ ಅದೇ ಕಾರ್ಕಳ ತಾಲೂಕು ತೀವ್ರ ಬರಗಾಲದ ಪಟ್ಟಿಗೆ ಸೇರಿದೆ!

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆ ತೀವ್ರವಾಗಿ ಕಂಡು ಬಂದಿದೆ. ಕಾರ್ಕಳದ ಜತೆಗೆ ಬ್ರಹ್ಮಾವರ ತಾಲೂಕು ಸಾಧಾರಣ ಬರ ಪೀಡಿತರ ಪಟ್ಟಿಗೆ ಸೇರಿದೆ.

ಅಧ್ಯಯನ
2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಾಲೂಕಿನಲ್ಲಿ ಜಿಲ್ಲಾಧಿಕಾರಿ, ಆಯಾ ಜಿಲ್ಲೆಯ ಕೃಷಿ, ತೋಟಗಾರಿಕೆ, ಮತ್ತು ಕಂದಾಯ ಅಧಿಕಾರಿಗಳು ಹಾಗೂ ಇತರ ಸಿಬಂದಿಗಳ ಒಳಗೊಂಡ ತಂಡವನ್ನು ರಚಿಸಿ ಮಾದರಿ ಬರ ಅಧ್ಯಯನ ನಡೆಸಲಾಗಿತ್ತು. ತಾಲೂಕಿನ ಮರ್ಣೆ, ನಿಂಜೂರು, ರೆಂಜಾಳ, ಬೋಳ ಗ್ರಾಮಗಳಲ್ಲಿ ಬರ ಪರಿಸ್ಥಿತಿ ಅಧ್ಯಯನ ನಡೆಸಲಾಗಿತ್ತು.ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಹಾನಿ ಕ್ಷೇತ್ರ ದೃಢೀಕರಣವನ್ನು ಕೈಗೊಂಡು ವರದಿ ಸಿದ್ಧಪಡಿಸಲಾಗಿತ್ತು.

ಬರ ಅಧ್ಯಯನ ಮಾನದಂಡವೇನು?
ಶುಷ್ಕ ಹವಾಮಾನ, ತೇವಾಂಶ ಕೊರತೆ, ಅಂತರ್ಜಲ ಸೂಚ್ಯಂಕ, ಅಣೆಕಟ್ಟು, ಜಲಾಶಯಗಳಲ್ಲಿ ನೀರಿನ ಸಂಗ್ರಹಣೆ ಮಟ್ಟ, ನದಿಗಳಲ್ಲಿನ ಒಳ ಹರಿವು ಆಧಾರದ ಮೇಲೆ ಮಳೆ ಪ್ರಮಾಣವನ್ನು ಕೂಡ ಬರ ಅಧ್ಯಯನದಲ್ಲಿ ಅಂದಾಜಿಸಲಾಗಿತ್ತು. ವಾಡಿಕೆ ಮಳೆ ಮತ್ತು ಸುರಿದ ಮಳೆಯನ್ನು ಆಯಾಮವಾಗಿರಿಸಿಕೊಂಡು ಬರಪೀಡಿತ ತಾಲೂಕಾಗಿ ಪರಿಗಣಿಸಲಾಗಿದೆ.

ಇನ್ನಷ್ಟು ಅಧ್ಯಯನ
ಮಾದರಿ ಅಧ್ಯಯನದ ಪ್ರಕಾರ ಸದ್ಯ ಸರಕಾರ ಬರ ಪೀಡಿತ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಎರಡು ತಾಲೂಕುಗಳನ್ನು ಘೋಷಿಸಿದೆ. ಮುಂದಿನ ದಿನಗಳಲ್ಲಿ ಕೃಷಿ, ತೋಟಗಾರಿಕೆ, ಕಂದಾಯ ವಿಭಾಗಗಳಲ್ಲಿ ಇನ್ನಷ್ಟು
ಅಧ್ಯಯನ ನಡೆಯಲಿದೆ.

Scroll to Top