350 ವರ್ಷಗಳ ಬಳಿಕ ಭಾರತಕ್ಕೆ ಮರಳಲಿದೆ ಶಿವಾಜಿ ಮಹಾರಾಜರ ‘ವ್ಯಾಘ್ರ ನಖ’

ಲಂಡನ್: 1659 ರಲ್ಲಿ ಬಿಜಾಪುರ (ಇಂದಿನ ವಿಜಯಪುರ) ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಸೋಲಿಸಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದ ಐತಿಹಾಸಿಕ ‘ವ್ಯಾಘ್ರ ನಖ’ ಮುಂದಿನ ನವೆಂಬರ್ ತಿಂಗಳಲ್ಲಿ ಲಂಡನ್‌ನಿಂದ ಭಾರತಕ್ಕೆ (ಮಹಾರಾಷ್ಟ್ರಕ್ಕೆ) ಮರಳಲಿದೆ.

ಪ್ರಸಕ್ತ ವರ್ಷದಲ್ಲೇ ಶಿವಾಜಿ ಮಹಾರಾಜರ ಪಟ್ಟಾಭಿಷೇಕದ 350ನೇ ವಾರ್ಷಿಕೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಾಜಿ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನಿನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ವಸ್ತುಸಂಗ್ರಹಾಲಯದಿಂದ ವ್ಯಾಘ್ರ ನಖವನ್ನು ಮರಳಿ ತರಲಾಗುತ್ತಿದೆ.

ಮಹಾರಾಷ್ಟ್ರಕ್ಕೆ ವ್ಯಾಘ್ರ ನಖವನ್ನು ತಂದ ಬಳಿಕ ಅದನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಭೇಟಿ ನೀಡಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ವ್ಯಾಘ್ರ ನಖವನ್ನು ನವೆಂಬರ್‌ನಲ್ಲಿ ತರುತ್ತಿದ್ದೇವೆ. ಅದಕ್ಕಾಗಿ MOUಗೆ ಸಹಿ ಹಾಕುತ್ತಿದ್ದೇವೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕೊಂದ ದಿನದಂದೇ ಅದನ್ನು ತರುವುದು ನಮ್ಮ ಪ್ರಯತ್ನ ಎಂದೂ ಸಚಿವರು ಹೇಳಿದ್ದಾರೆ.

Scroll to Top