ಹುಲಿ ಉಗುರಿನ ಲಾಕೆಟ್ ಧರಿಸಿರುವ ಆರೋಪ: ನಿಖಿಲ್‌ ಪರ ನೋಟಿಸ್‌ ಸ್ವೀಕರಿಸಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ

ಬೆಂಗಳೂರು, ಅ 25: ನಟ ನಿಖಿಲ್ ಕುಮಾರಸ್ವಾಮಿ ಹುಲಿ ಉಗುರಿನ ಲಾಕೆಟ್ ಧರಿಸಿರುವ ಆರೋಪದ ಬಗ್ಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ನಿಖಿಲ್ ಪರವಾಗಿ ಕುಮಾರಸ್ವಾಮಿ ಅವರೇ ಅರಣ್ಯಾಧಿಕಾರಿಗಳಿಂದ ನೋಟಿಸ್ ಸ್ವೀಕರಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಅವರು, ಪುತ್ರ ನಿಖಿಲ್ ಧರಿಸಿದ್ದು ಹುಲಿ ಉಗುರು ಎಂದು ತನಿಖೆಗೆ ಬಂದಿದ್ದರು. ಈ ಪೆಂಡೆಂಟ್ ಹುಲಿ ಉಗುರಿನದ್ದಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ತನಿಖೆಗೆ ಸಂಪೂರ್ಣ ಸಹಕರಿಸಿದ್ದೇನೆ ಎಂದರು.

ನಾನೇ ಇಂದು ಬೆಳಗ್ಗೆ 11 ಗಂಟೆಗೆ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದ್ದೆ. ನಿಮ್ಮ ಅಧಿಕಾರಿಗಳನ್ನು ಕಳುಹಿಸಿಕೊಡಿ ಎಂದು ಹೇಳಿದ್ದೆ ಎಂದರು.

ನಿಖಿಲ್ ಯಾವಾಗಲೂ ಬಂಗಾರ ಹಾಕುವುದಿಲ್ಲ ಎಂದ ಅವರು, ಕಾನೂನು ರಚನೆ ಮಾಡುವವರು ನಾವು ನಮಗೆ ಪರಿಜ್ಞಾನ ಇಲ್ಲವೇ? ನನ್ನ ಪುತ್ರ ನಿಖಿಲ್ ಮದುವೆ ಸಂದರ್ಭದಲ್ಲಿ ಧರಿಸಿದ್ದು ಇದೇ ಪೆಂಡೆಂಟ್. ನಾನೇ ಅಧಿಕಾರಿಗಳ ಜೊತೆಯಲ್ಲಿ ಚಿನ್ನದ ಅಂಗಡಿಗೆ ಕಳಿಸ್ತೇನೆ. ಎಫ್​ಎಸ್​ಎಲ್​ಗೆ​ ಕಳಿಸಿ ವಾಸ್ತವಾಂಶ ಪತ್ತೆ ಹಚ್ಚಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

Scroll to Top