ಹಾವು ಕಡಿತಕ್ಕೊಳಗಾದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಅಪಘಾತ; ವ್ಯಕ್ತಿ ಮೃತ್ಯು

ಕಾಸರಗೋಡು, ಅ 30: ಹಾವು ಕಡಿತಕ್ಕೆ ಒಳಗಾಗಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಆದೂರು ಸಮೀಪದ ಕೊಟ್ಟೂರು ನೆಕ್ರಂಪಾರೆಯಲ್ಲಿ ರವಿವಾರ ರಾತ್ರಿ ನಡೆದಿದೆ.

ಬೆಳ್ಳೂರು ಅದ್ವಾಲದ ಕೃಷ್ಣ (50) ಮೃತಪಟ್ಟವರು. ರಾತ್ರಿ ಕೃಷ್ಣ ಅವರಿಗೆ ಮನೆ ಸಮೀಪ ಹಾವು ಕಚ್ಚಿದ್ದು, ಇದರಿಂದ ಸಂಬಂಧಿಕ ಗೋಪಾಲರವರು ಬೈಕ್ ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನೆಕ್ರಂಪಾರೆಯಲ್ಲಿ ಬೈಕ್ ಕಾರು ನಡುವೆ ಅಪಘಾತ ಸಂಭವಿಸಿದೆ.

ಇಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದು, ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರು ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೃಷ್ಣ ಮೃತಪಟ್ಟಿದ್ದಾರೆ.

ಗಂಭೀರ ಗಾಯಗೊಂಡ ಗೋಪಾಲ ರವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ನೀಡಲಾಗಿದೆ.

Scroll to Top