ಕನಸಿನಲ್ಲಿ ಜಾಗ ತೋರಿದ ದೇವರು – ಮುಸ್ಲಿಂ ವ್ಯಕ್ತಿ ವಶದಲ್ಲಿದ್ದ ಜಾಗದಲ್ಲಿ 700 ವರ್ಷ ಹಳೆ ದೇವಾಲಯದ ಕುರುಹು ಪತ್ತೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತೆಕ್ಕಾರು ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆಯಾಗಿದೆ.

ಮುಸ್ಲಿಮರ ವಶದಲ್ಲಿದ್ದ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಂಡು, ಉತ್ಖನನ ನಡೆಸಿದಾಗ 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ಹಿನ್ನೆಲೆ ಊರವರು ಇಲ್ಲಿ ಭವ್ಯ ದೇವಸ್ಥಾನ ನಿರ್ಮಿಸುವ ಪಣ ತೊಟ್ಟಿದ್ದಾರೆ.

ಆರಂಭದಲ್ಲಿ ಜಮೀನಿನಲ್ಲಿ ಭೂ ಉತ್ಖನನ ನಡೆಸಿದಾಗ ಕೆಲವು ಕಡೆಗಳಲ್ಲಿ ದೇವರ ವಿಗ್ರಹಗಳು ಕಂಡು ಬಂದಿತ್ತು. ಇಲ್ಲಿ ಹಿಂದೆ ದೇವಾಲಯ ಇತ್ತು ಎಂಬ ನಂಬಿಕೆಯಿಂದ ಹುಡುಕಾಟ ನಡೆಸಿದಾಗ ಗೋಪಾಲಕೃಷ್ಣನ ವಿಗ್ರಹ ದೊರೆತಿದೆ. ಮುಸ್ಲಿಮರ ವಶದಲ್ಲಿದ್ದ ಜಮೀನಿನಲ್ಲಿ ಸುಮಾರು 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ.

ಇಲ್ಲಿ ಹಿಂದೆ ದೇವಸ್ಥಾನ ಇತ್ತು ಎಂಬ ಮಾತುಗಳನ್ನು ಸ್ಥಳೀಯರು ಆಡಿಕೊಳ್ಳುತ್ತಿದ್ದರು. ಮಾತ್ರವಲ್ಲದೇ ಲಕ್ಷ್ಮಣ ಎಂಬವರ ಕನಸಲ್ಲಿ ಶ್ರೀಕೃಷ್ಣನೇ ಬಂದು ದೇಗುಲ ಇರುವ ಬಗ್ಗೆ ಸುಳಿವು ನೀಡಿದ್ದಾಗಿ ಎನ್ನಲಾಗಿತ್ತು. ಈ ಜಾಗವನ್ನು ಸ್ಥಳೀಯ ಮುಸ್ಲಿಂ ನಿವಾಸಿಯೊಬ್ಬರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದ ಜನರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಳಿ ಈ ವಿಚಾರವನ್ನು ತಿಳಿಸಿದ್ದರು. ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಆ ಜಾಗ ಸರ್ಕಾರಿ ಭೂಮಿ ಎಂದು ತಿಳಿದುಬಂದಿತ್ತು.

ಶಾಸಕರು ಅನ್ಯಮತೀಯ ವ್ಯಕ್ತಿಯ ವಶದಲ್ಲಿದ್ದ ಸುಮಾರು 25 ಸೆಂಟ್ಸ್ ಜಾಗವನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಮಾಡಿಕೊಂಡಿದ್ದರು. ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿನಲ್ಲಿ ದಾಖಲೆಯಾಗುತ್ತಿದ್ದಂತೆ ಸ್ಥಳೀಯರು ಈ ಭೂಮಿಯಲ್ಲಿ ದೇವಸ್ಥಾನದ ಪಳೆಯುಳಿಕೆಗಳ ಬಗ್ಗೆ ಶೋಧ ನಡೆಸಿದ್ದರು. ಶೋಧನೆ ಮಾಡುತ್ತಾ, ಬಾವಿಯನ್ನು ಅಗೆಯುವ ಸಂದರ್ಭದಲ್ಲಿ ಅದರಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಗೋಪಾಲಕೃಷ್ಣ ಸ್ವಾಮಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ.

ಪ್ರಸ್ತುತ ದೇವಸ್ಥಾನವಿದ್ದ 25 ಸೆಂಟ್ಸ್ ಭೂಮಿಯ ಜೊತೆಗೆ ಮತ್ತೆ 70 ಸೆಂಟ್ಸ್ ಭೂಮಿಯನ್ನು ಖರೀದಿಸಲಾಗಿದೆ. ಮುಂದೆ ಊರವರು ಸ್ಥಳದಲ್ಲಿ ಶೀಘ್ರವೇ ಗೋಪಾಲಕೃಷ್ಣ ಭವ್ಯ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ.

Scroll to Top