ಇತಿಹಾಸದಲ್ಲೇ ಮೊದಲ ಬಾರಿಗೆ ಬೆಂಗಳೂರಲ್ಲಿ ಕಂಬಳ ; ಯಾವಾಗ..? ಎಲ್ಲಿ..?

ಬೆಂಗಳೂರು : ಇತಿಹಾಸದಲ್ಲೇ ಮೊದಲ ಬಾರಿಗೆ ಸಿಲಿಕಾನ್ ಸಿಟಿಯಲ್ಲಿ ನಮ್ಮ ಕಂಬಳ ನಡೆಯಲಿದೆ. ಲಕ್ಷಾಂತರ ಜನ ಸೇರಲು ಸಕಲ ತಯಾರಿಯೂ ಆಗಿದೆ. ಈ ಮಧ್ಯೆ ಕಂಬಳ ಸಮಿತಿ ಅಪ್ಪು ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನ ಕೊಟ್ಟಿದೆ. ಕರಾವಳಿಯ ಜಾನಪದ ಆಟ. ಹಳ್ಳಿ ಸೊಗಡಿನ ಹಬ್ಬ. ತುಳುನಾಡಿನ ಸಾಂಸ್ಕೃತಿಕ ಕ್ರೀಡೆ. ಕಂಬಳ. ಮೊಟ್ಟ ಮೊದಲ ಬಾರಿಗೆ ರಾಜಧಾನಿ ಪ್ರವೇಶ ಮಾಡಿದೆ. ವಿಶೇಷ ಅಂದ್ರೆ ಬೆಂಗಳೂರು ಕಂಬಳಕ್ಕೆ ಅಪ್ಪು ಹೆಸರಿಡಲು ಕಂಬಳ ಸಮಿತಿ ನಿರ್ಧರಿಸಿದೆ.

ಹೌದು, ಕರಾವಳಿಯ ಜಾನಪದ ಆಟ ಕಂಬಳ ನೋಡೋದೆ ಕಣ್ಣಿಗೊಂದು ಹಬ್ಬ. ಅಂತಹದ್ದರಲ್ಲಿ ಈ ಆಟ ಇದೀಗ ರಾಜಧಾನಿಯಲ್ಲಿ ಸದ್ದು ಮಾಡಲು ತುದಿಗಾಲಲ್ಲಿ ನಿಂತಿದೆ. ಇದೇ ತಿಂಗಳ 25 ಮತ್ತು 26ರಂದು ನಗರದ ಪ್ಯಾಲೇಸ್ ಮೈದಾನದಲ್ಲಿ ಅದ್ದೂರಿಯಾಗಿ ಅಬ್ಬರಿಸಲಿದೆ. ಇದಕ್ಕಾಗಿ ಈಗಾಗಲೇ ಭರದ ಸಿದ್ದತೆಗಳು ನಡೆಯುತ್ತಿದ್ದು, ಟ್ರ್ಯಾಕ್ ನಿರ್ಮಾಣ ಕಾರ್ಯವೂ ಪೂರ್ತಿಗೊಂಡಿದೆ.
‘ಬೆಂಗಳೂರು ಕಂಬಳ ನಮ್ಮ ಕಂಬಳ’ ಎಂಬ ಟ್ಯಾಗ್ ಲೈನ್ನೊಂದಿಗೆ ಈ ಜಾನಪದ ಕ್ರೀಡೆ ಸೆಟ್ಟೇರಲಿದೆ. ಇನ್ನು ಈ ಜೋಡುಕರೆ ಕಂಬಳಕ್ಕೆ ಹೆಸರು ಫಿಕ್ಸ್ ಆಗಿರಲಿಲ್ಲ.

ಈಗಾಗಲೇ ಇರುವ ಕಂಬಳಗಳ ಕರೆಗಳಿಗೆ ಸೂರ್ಯ-ಚಂದ್ರ, ಕೋಟಿ-ಚೆನ್ನಯ, ರಾಮ-ಲಕ್ಷ್ಮಣ, ಕಾಂತಬಾರೆ-ಬೂದಬಾರೆ ಎಂಬಿತ್ಯಾದಿ ಹೆಸರುಗಳಿವೆ. ಹಾಗಾಗಿ ಬೆಂಗಳೂರಿಗೆ ಯಾವ ಹೆಸರಿಡಬಹುದು ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಅದಕ್ಕೆ ತೆರೆಬಿದ್ದಿದೆ. ಕರುನಾಡ ರಾಜಕುಮಾರ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಈ ಬಾರಿ ಬೆಂಗಳೂರು ಕಂಬಳಕ್ಕೆ ಕನ್ನಡದ ಲೆಜೆಂಡ್ ನಟರಾದ ರಾಜ್ ಕುಮಾರ್ ಮತ್ತು ಪುನೀತ್ ಅವರ ಹೆಸರುಗಳು ಜೊತೆ ಸೇರಿಸುವಂತೆ ‘ಪುನೀತ್-ರಾಜ್’ ಕಂಬಳ ಎಂದು ನಾಮಕರಣ ಮಾಡಲಾಗಿದೆ.

ಉಳಿದಂತೆ ಬೆಂಗಳೂರು ಕಂಬಳದ ಸಿದ್ದತೆಗಳು ಪೂರ್ಣಗೊಂಡಿದ್ದು ಕಂಬಳ ಕರೆಗಾಗಿ ಮತ್ತು ಇತರ ಬಳಕೆಗಾಗಿ ಪ್ಯಾಲೇಸ್ ಗ್ರೌಡ್ನಲ್ಲಿ ಎರಡು ಬೋರ್ವೆಲ್ ಕೊರೆಸಲಾಗಿದೆ. ಈ ಎರಡೂ ಬೋರ್ ವೆಲ್ ನಲ್ಲೂ ಯಥೇಚ್ಛವಾಗಿ ನೀರು ದೊರಕಿದ್ದು, ಕಂಬಳಕ್ಕೆ ಪೂರಕ ವಾತಾವರಣ ಕಲ್ಪಿಸಿದೆ. ಜೊತೆಗೆ ಇಲ್ಲಿರುವ ಹುತ್ತಗಳಿಗೂ ಕಟ್ಟೆಯನ್ನು ಕಟ್ಟಿ ಸಂರಕ್ಷಿಸಿಕೊಂಡು ಬರಲಾಗಿದೆ. ಒಂದು ಕಾಲದಲ್ಲಿ ಸರ್ಕಸ್ ನಡೆಯುತ್ತಿದ್ದ ಈ ಗ್ರೌಂಡ್ ಕ್ರಮೇಣ ಕಸದ ರಾಶಿಗಳಿಂದ, ಮುಳ್ಳುಗಂಟೆಗಳಿಂದ ತುಂಬಿತ್ತು. ಸದ್ಯ ಕಂಬಳದ ನೆಪದಲ್ಲಿ ಗ್ರೌಡ್ ಕೂಡ ಸ್ವಚ್ಚಗೊಂಡಿದೆ.

ಒಟ್ಟಿನಲ್ಲಿ ಇದೇ ಶನಿವಾರ ಮತ್ತು ಭಾನುವಾರ ಕಂಬಳ ವಿಜೃಂಭಣೆಯಿಂದ ನಡೆಯಲಿದ್ದು, ರಾಜಧಾನಿ ತುಳುನಾಡಿನ ಗ್ರಾಮೀಣ ಕ್ರೀಡೆಯನ್ನು ಕಣ್ತುಂಬಿಕೊಳ್ಳಲು ಕಾತರಿಸುತ್ತಿದೆ.

Scroll to Top