ವಯನಾಡ್, ಶಿರೂರು ದುರಂತದ ಭಯ : ಆದೇಶ ಹೊರಡಿಸಿದ 24 ಗಂಟೆಯಲ್ಲೇ 69 ಎಕರೆ ಅರಣ್ಯ ಒತ್ತುವರಿ ತೆರವು!

ಬೆಂಗಳೂರು : ಕರ್ನಾಟಕದ 10 ಜಿಲ್ಲೆಗಳ ವ್ಯಾಪ್ತಿಯ ಪಶ್ಚಿಮಘಟ್ಟ ಮತ್ತು ಇತರೆ ಘಟ್ಟ ಪ್ರದೇಶಗಳಲ್ಲಿ ಒತ್ತುವರಿ ತತ್‌ಕ್ಷಣದಿಂದಲೇ ತೆರವು  ಮಾಡುವಂತೆ ಇತ್ತೀಚೆಗೆ ಅರಣ್ಯ ಖಾತೆ ಸಚಿವ ಈಶ್ವರ್‌ ಖಂಡ್ರೆ ಸೂಚಿಸಿದ್ದರು. ಇದೀಗ ಅವರ ಸೂಚನೆ ಮೇರೆಗೆ 24 ಗಂಟೆಯಲ್ಲಿ ನೂತನ ಕಾರ್ಯಪಡೆ ರಚಿಸಿ ಪಶ್ಚಿಮಘಟ್ಟದಲ್ಲಿ ಒತ್ತುವರಿಯಾಗಿದ್ದ 69 ಎಕರೆ ಅರಣ್ಯ ತೆರವು ಕಾರ್ಯಾಚರಣೆ ಆರಂಭ ಮಾಡಲಾಗಿದೆ.

ಪಶ್ಚಿಮಘಟ್ಟ, ಅರಣ್ಯ ಒತ್ತುವರಿ ತೆರವು ಕಾರ್ಯಪಡೆ ಅಧ್ಯಕ್ಷ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್ ಆದೇಶದಂತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಹೋಬಳಿಯಲ್ಲಿ 31 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ಮಾಗುಂಡಿ ಗ್ರಾಮದ ಸರ್ವೆ ನಂ. 29ರಲ್ಲಿ 17 ಎಕರೆ 17 ಗುಂಟೆ, ಹಲಸೂರು ಗ್ರಾಮದ ಸರ್ವೆ ನಂ. 55ರಲ್ಲಿ 13 ಎಕರೆ 38 ಗುಂಟೆ, ತನುಡಿ ಸರ್ವೆ ನಂ. 9, 21, 22, 23, 72, 97ರಲ್ಲಿ 36 ಎಕರೆ ಸೇರಿ ಒಟ್ಟು 69 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ಆರಂಭಿಸಲಾಗಿದೆ.

ಚಿಕ್ಕಮಗಳೂರು, ಶಿವಮೊಗ್ಗ, ಮೈಸೂರು, ಚಾಮರಾಜನಗರ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಕೊಡಗು, ಹಾಸನ ಸೇರಿದಂತೆ ರಾಜ್ಯದ ಪಶ್ಚಿಮಘಟ್ಟದಲ್ಲಿ 2015 ರಿಂದ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವ ಈಶ್ವರ್‌ ಖಂಡ್ರೆ  ಸೂಚನೆ ನೀಡಿದ್ದರು. ಅದರಂತೆ ಇಂದು ಚಿಕ್ಕಮಗಳೂರು ಜಿಲ್ಲೆಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗಿದೆ.

2 ಲಕ್ಷಕ್ಕೂ ಹೆಚ್ಚು ಎಕರೆ ಒತ್ತುವರಿಯನ್ನ ತೆರವು ಮಾಡಿದ್ದೇವೆ – ಈಶ್ವರ್ ಖಂಡ್ರೆ

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಈಶ್ವರ್ ಖಂಡ್ರೆ, ಒಟ್ಟು 2 ಲಕ್ಷಕ್ಕೂ ಹೆಚ್ಚು ಎಕರೆ ಒತ್ತುವರಿಯನ್ನ ತೆರವು ಮಾಡಿದ್ದೇವೆ. ಒತ್ತುವರಿ ಮಾಡುವುದರಲ್ಲಿ ಯಾವುದೇ ಕಾಲ ಹರಣ ಆಗಿಲ್ಲ. ಇದರ ಎಲ್ಲಾ ಮಾಹಿತಿ ನಾನು ಇನ್ನಷ್ಟು ನೀಡುತ್ತೇವೆ ಎಂದು ಹೇಳಿದ್ದಾರೆ.

ಈಗಾಗಲೇ ಒತ್ತುವರಿ ತೆರವು ಕಾರ್ಯ ಪಡೆ ರಚನೆ ಆಗಿದೆ. ಅನಧಿಕೃತ ಹೋಂ ಸ್ಟೇ ಗಳನ್ನ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. 2015 ನಂತರ ಆಗಿರುವ ಹೋಂ ಸ್ಟೇ, ರೆಸಾರ್ಟ್ಗಳನ್ನ ತೆರವು ಮಾಡಲಾಗುತ್ತದೆ. ಅಧಿಕೃತವಾಗಿ ಅವರ ಜಮೀನಿನಲ್ಲೆ ಕಟ್ಟಿದ್ದರೆ ಯಾವುದೇ ಕ್ರಮ ಇಲ್ಲ. 3 ಎಕರೆ ಒಳಗೆ ಇರುವವರನ್ನ ತೆರೆವುಗೊಳಿಸದಂತೆ ನಿಯಮ ಇದೆ. ಅಧಿಕಾರಿಗಳು ಶಾಮಿಲಾಗಿದ್ದರು ಕೂಡ ಕ್ರಮ‌ ತೆಗೆದುಕೊಳ್ಳುತ್ತೇವೆ ಎಂದಿದ್ದಾರೆ.

Baravanige News

Translate »

You cannot copy content from Baravanige News

Scroll to Top