ಉಡುಪಿ ಜಿಲ್ಲಾಧಿಕಾರಿ ವಿರುದ್ದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಧರಣಿ

ಬೈಂದೂರು, ಆ. 13: ತಾನು ಕರೆಯುವ ಸಭೆಗಳಿಗೆ ಅಧಿಕಾರಿಗಳಿಗೆ ಹೋಗದಂತೆ ಜಿಲ್ಲಾಧಿಕಾರಿ ಆದೇಶ ಮಾಡಿದ್ದಾರೆ ಎಂದು ಗರಂ ಆಗಿರುವ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಬೈಂದೂರು ತಾಲ್ಲೂಕು ಆಡಳಿದ ಸೌಧದ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ್ದಾರೆ.

ಗಂಟಿಹೊಳೆ ಅವರು ವಿವಿಧ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಕಾರ್ಯಕರ್ತ ಕಚೇರಿಯಲ್ಲಿ ಇಂದು ಅಧಿಕಾರಿಗಳ ಸಭೆ ನಿಗದಿಗೊಳಿಸಿದ್ದರು. ಆದರೆ ಈ ಸಭೆಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಕರೆ ಮಾಡಿ ಸೂಚಿಸಿದ್ದರು. ಹೀಗಾಗಿ ಅಧಿಕಾರಿಗಳು ಸಭೆಗೆ ಹಾಜರಾಗಿರಲಿಲ್ಲ. ಇದರಿಂದ ಕೆರಳಿದ ಶಾಸಕರು ಜಿಲ್ಲಾಡಳಿತದ ವಿರುದ್ಧವೇ ಬೈಂದೂರು ತಾಲ್ಲೂಕು ಆಡಳಿದ ಸೌಧದ ಮುಂಭಾಗದಲ್ಲಿ ಕಾರ್ಯಕರ್ತರೊಂದಿಗೆ ಧರಣಿ ನಡೆಸಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕರು, ಸಂವಿಧಾನದಲ್ಲಿ ಶಾಸಕರಿಗಾಗಿಯೇ ಕೆಲವು ಅಧಿಕಾರ ಅವಕಾಶಗಳಿವೆ. ಆದರೆ ಈಗ ಅದಕ್ಕೆ ಅಡ್ಡಪಡಿಸುತ್ತಿದ್ದಾರೆ. ಜನ ಕರೆದಲ್ಲಿಗೆ ನಾನು ಹೋಗಬೇಕು, ನಾನು ಕರೆದಲ್ಲಿಗೆ ಜನರ ಅಹವಾಲು ಸ್ವೀಕರಿಸಲು ಅಧಿಕಾರಿಗಳು ಬರಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇರುವುದು ಜನಸೇವೆಗೆ ಎಂದರು. ಸರ್ಕಾರ ನೀಡಿದ ಒಂದು ಕಚೇರಿಯಲ್ಲಿ ಕಾಲ ಮೇಲೆ ಕಾಲು ಹಾಕಿ ದರ್ಬಾರ್ ನಡೆಸುವ ವ್ಯಕ್ತಿ ನಾನಲ್ಲ. ತಾಲ್ಲೂಕಿನ ಜನತೆಯ ಉಪಯೋಗಕ್ಕಾಗಿ ಕ್ಷೇತ್ರದ ನಾಲ್ಕು ಭಾಗಗಳಲ್ಲಿ ಕಚೇರಿ ತೆರೆದಿದ್ದೇನೆ. ಈ ಕಚೇರಿಗಳಲ್ಲಿ ನಡೆಯುವ ಸಭೆಗಳಿಗೆ ಅಧಿಕಾರಿಗಳು ಹೋಗದಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡುತ್ತಿರುವುದು ಏಕೆ. ಜಿಲ್ಲಾಧಿಕಾರಿಗಳಿಗೆ ರಾಜಕೀಯ ಒತ್ತಡವಿದ್ದರೆ ನೇರ ಹೇಳಿ ಬಿಡಲಿ. ಶಾಸಕನ ಹಕ್ಕು ಮೊಟಕುಗೊಳಿಸುತ್ತಿರುವ ಆಡಳಿತಯಂತ್ರದ ವಿರುದ್ಧ ಅಹೋರಾತ್ರಿ ಧರಣಿಯ ಸಮರ ಸಾರಿದ್ದೇನೆ. ಸ್ಪಷ್ಟನೆ ಲಭ್ಯವಾಗುವವರೆಗೆ ವಿರಮಿಸುವ ಮಾತೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾತ್ರಿ ವೇಳೆ ಕುಂದಾಪುರ ಸಹಾಯಕ ಕಮಿಷನರ್ ಮಹೇಶ್ಚಂದ್ರ ಅವರು ಸ್ಥಳಕ್ಕೆ ಬಂದು ಶಾಸಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸಲು ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಜಿಲ್ಲಾಧಿಕಾರಿ ಅವರು ಬಂದು ಸ್ಪಷ್ಟನೆ ನೀಡುವವರೆಗೂ ಪ್ರತಿಭಟನೆ ನಿಲ್ಲದು ಎಂದು ಶಾಸಕರು ತಿಳಿಸಿದರು.

Baravanige News

Translate »

You cannot copy content from Baravanige News

Scroll to Top