ಮುಳುವಾದ ಸೌಂದರ್ಯ… ಪತ್ನಿ ನೋಡಲು ಸುಂದರವಾಗಿದ್ದಾಳೆಂದು ಆಕೆಯ ಕಥೆಯನ್ನೇ ಮುಗಿಸಿದ ಪತಿರಾಯ

ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ ಕೆಲವು ಜಗಳಗಳು ವಿಚ್ಛೇದನದವರೆಗೂ ಹೋದ್ರೆ, ಇನ್ನೂ ಕೆಲವು ಕ್ಷುಲ್ಲಕ ಕಾರಣಕ್ಕೆ ಜಗಳ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಅದು ಕೊಲೆಯಲ್ಲಿ ಅಂತ್ಯಗೊಂಡ ಉದಾಹರಣೆಯೂ ಇವೆ. ಇದೀಗ ಇಲ್ಲೊಂದು ಅಂತಹದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು, ದಿನದಿಂದ ದಿನಕ್ಕೆ ಪತ್ನಿಯ ಸೌಂದರ್ಯ ಹೆಚ್ಚಾಗುತ್ತಿದೆ ಎಂಬ ಕಾರಣಕ್ಕೆ ಪತಿರಾಯ ತನ್ನ ಸ್ನೇಹಿತರ ಜೊತೆ ಸೇರಿ ಆಕೆಯ ಕಥೆಯನ್ನೇ ಮುಗಿಸಿದ್ದಾನೆ.

ಪ್ರತಿಯೊಬ್ಬ ಗಂಡು ಕೂಡಾ ತನ್ನ ಪತ್ನಿ ಸುಂದರವಾಗಿರಬೇಕು ಎಂದು ಬಯಸುತ್ತಾನೆ. ಆದ್ರೆ ರಾಮನಗರದ ಮಾಗಡಿಯಲ್ಲಿ ಇದಕ್ಕೆ ತದ್ವಿರುದ್ಧವಾದ ಆಘಾತಕಾರಿ ಘಟನೆಯೊಂದು ನಡೆದಿದ್ದು, ಹೆಂಡತಿಯ ಸೌಂದರ್ಯವನ್ನು ಸಹಿಸಲಾರದೆ ಗಂಡ ಆಕೆಯ ಕಥೆಯನ್ನೇ ಮುಗಿಸಿದ್ದಾನೆ.

ದಿವ್ಯಾ ಎಂಬ ಮಹಿಳೆ ಉಮೇಶ್ ಎಂಬವನನ್ನು ಮದುವೆಯಾಗಿರುತ್ತಾಳೆ. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ನಂತರದಲ್ಲಿ ಆಕೆ ಸುಂದರವಾಗಿ ಕಾಣಲು ಲಿಪ್ಸ್ಟಿಕ್ ಹಚ್ಚುತ್ತಾಳೆ, ಟ್ಯಾಟೂ ಹಾಕಿಸಿಕೊಳ್ಳುತ್ತಾಳೆ ಎಂಬ ಕಾರಣಕ್ಕೆ ಉಮೇಶ ಪದೇ ಪದೇ ಜಗಳವಾಡುತ್ತಿದ್ದ. ಆಕೆಯ ಮೇಲೆ ಅನುಮಾನ ಪಡುತ್ತಿದ್ದ. ಇದರಿಂದ ಬೇಸತ್ತ ದಿವ್ಯಾ ಕೆಲ ದಿನಗಳ ಹಿಂದೆ ಮಾಗಡಿ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಪ್ರಕರಣದಲ್ಲಿ ಇಬ್ಬರೂ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಹಾಜರಾಗಿದ್ದರು. ಅಲ್ಲಿ ಡಿವೋರ್ಸ್ ಏನೂ ಬೇಡ ಇನ್ನು ಮುಂದೆ ಅನುಮಾನ ಪಡುವುದಿಲ್ಲ, ನಿನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ದಿವ್ಯಾಗೆ ಉಮೇಶ್ ಭರವಸೆ ನೀಡಿದ್ದಾನೆ.

ಗಂಡ ಬದಲಾಗಿದ್ದಾನೆ ಎಂದುಕೊಂಡ ದಿವ್ಯಾ ಅವನ ಮಾತನ್ನು ನಂಬಿದಳು. ಹೀಗೆ ಆಕೆಯನ್ನು ನಂಬಿಸಿ ದೇವಸ್ಥಾನಕ್ಕೆ ಹೋಗೋಣ ಬಾ ಎಂದು ಹೇಳಿ ಜಿಲ್ಲೆಯ ಊಜಗಲ್ಲು ಬೆಟ್ಟಕ್ಕೆ ಕರೆದುಕೊಂಡು ಹೋಗಿ ಉಮೇಶ್ ತನ್ನ ಸ್ನೇಹಿತರೊಂದಿಗೆ ಸೇರಿ ದಿವ್ಯಾಳನ್ನು ಕೊಲೆಗೈದಿದ್ದಾನೆ. ಬಳಿಕ ಮೃತದೇಹವನ್ನು ಚೀಲೂರು ಅರಣ್ಯ ಪ್ರದೇಶದಲ್ಲಿ ಎಸೆದು ಎಸ್ಕೇಪ್ ಆಗಿದ್ದಾರೆ.

ಪೊಲೀಸರು ಈಗಾಗಲೇ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದು, ತಲೆಮರೆಸಿಕೊಂಡಿರುವ ಪತಿ ಉಮೇಶ್ ಸೇರಿ ಮತ್ತೋರ್ವ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ. ಘಟನೆ ಸಂಬಂಧ ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top