‘ಸರಕಾರಿ ಜಾಗದಲ್ಲಿ ಮನೆಕಟ್ಟಿರುವ ಬಡವರ ಮನೆ ಬಾಗಿಲಿಗೆ ಹಕ್ಕು ಪತ್ರ’ – ವಿನಯ್ ಕುಮಾರ್ ಸೊರಕೆ

ಪೆರ್ಡೂರು: ಕಾಂಗ್ರೆಸ್‌ ಬಡವರ ಪಕ್ಷವಾಗಿದ್ದು ಹಿಂದಿನಿಂದಲೂ ಬಡವರಿಗೆ ಮನೆ, ಹಕ್ಕುಪತ್ರಗಳನ್ನು ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸಿದರೆ ಸರಕಾರಿ ಜಾಗದಲ್ಲಿ ಬಹಳಷ್ಟು ವರ್ಷಗಳಿಂದ ಮನೆ ಮಾಡಿ ಕೂತವರಿಗೆ ಯಾರಿಗೆಲ್ಲಾ ಹಕ್ಕುಪತ್ರಗಳು ಸಿಕ್ಕಿಲ್ಲವೋ ಅವರಿಗೆ ಕೂತಲ್ಲಿಗೇ, ಅದೇ ಜಾಗಕ್ಕೆ ಹಕ್ಕುಪತ್ರ ಒದಗಿಸುವ ಮಹತ್ಕಾರ್ಯಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ಮಾಜಿ ಸಚಿವ, ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

ಪೆರ್ಡೂರು ಬುಕ್ಕಿಗುಡ್ಡೆಯ ಕೈರ್‌ ಪ್ರದೇಶದಲ್ಲಿ ಮನೆ ಮನೆ ಚುನಾವಣಾ ಪ್ರಚಾರ, ಪೆರ್ಡೂರು ವ್ಯಾಪ್ತಿಯ ಹತ್ರಿಬೆ„ಲು ವಿಜಯಲಕ್ಷ್ಮೀ ಕ್ಯಾಶ್ಯೂ ಇಂಡಸ್ಟ್ರೀಸ್‌ ಮತ್ತು ಬುಕ್ಕಿಗುಡ್ಡೆ ಎಪಿಎಂ ಕ್ಯಾಶ್ಯೂ ಇಂಡಸ್ಟ್ರೀಸ್‌ಗೆ ಭೇಟಿ ಮತಯಾಚನೆ ನಡೆಸಿದ ಸಂದರ್ಭ ಅವರು ಮಾತನಾಡಿದರು.


ಸರಕಾರಿ ಜಾಗದಲ್ಲಿ ಮನೆ ಮಾಡಿದ್ದ ಬಡವರನ್ನು ಒಕ್ಕಲೆಬ್ಬಿಸಿದ್ದು ಬಿಜೆಪಿ ಸಾಧನೆ :

ಸರಕಾರಿ ಜಾಗದಲ್ಲಿ ಕೂತ ಬಡವರನ್ನು ಎಬ್ಬಿಸಿ ಬುಲ್ಡೋಜರ್‌ ಓಡಿಸಿ ಒಕ್ಕಲೆಬ್ಬಿಸುವ ದುಸ್ಸಾಹಸಕ್ಕೆ ಬಿಜೆಪಿ ಕೈ ಹಾಕಿದೆ. ಕಳೆದ 5 ವರ್ಷದಲ್ಲಿ ಬಿಜೆಪಿ ಮಾಡಿರುವ ಸಾಧನೆಗಳಲ್ಲಿ ಇದು ಕೂಡಾ ಒಂದಾಗಿದೆ. ಕಾಂಗ್ರೆಸ್‌ ಇಂದಿರಾ ಗಾಂಧಿ ಕಾಲದಿಂದಲೂ ಡಿಕ್ಲರೇಷನ್‌ ಕಾನೂನು ಮೂಲಕ ಭೂಮಿ ನೀಡುವ ಮಹತ್ಕಾರ್ಯವನ್ನು ನಡೆಸಿಕೊಂಡು ಬಂದಿದೆ. ಮುಂದೆ ಕೂಡಾ ಬಡವರು ಸರಕಾರಿ ಜಾಗದಲ್ಲಿ ಕೂತಲ್ಲಿ, ಅದೇ ಸ್ಥಳದಲ್ಲೇ ಹಕ್ಕು ಪತ್ರ ನೀಡುವ ಕೆಲಸವನ್ನು ಮಾಡಲಾಗುವುದು ಅಂತಾ ವಿನಯ ಕುಮಾರ್‌ ಸೊರಕೆ ಹೇಳಿದರು.


ಪಕ್ಷದ ಪ್ರಮುಖರಾದ ಸಂತೋಷ್‌ ಕುಲಾಲ್‌, ದಿನೇಶ್‌ ಪೂಜಾರಿ, ಶೋಭಾ, ರಾಮದಾಸ್‌, ಹರೀಶ್‌, ರಾಮ ಕುಲಾಲ್‌, ರಘುನಾಥ್‌ ನಾಯ್ಕ, ಸುಂದರ, ರಾಘವ ಶೆಟ್ಟಿ, ಶರತ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ವಿಶ್ವಕರ್ಮ ಸಮುದಾಯಕ್ಕೂ ಕಾಂಗ್ರೆಸ್‌ನಲ್ಲಿ ಪ್ರಾತಿನಿಧ್ಯ
ಶಿಲ್ಪಕಲೆ ಭಾರತದ ಪ್ರಾಚೀನ ಕಲೆಗಳಲ್ಲಿ ಒಂದಾಗಿದೆ. ವಿಶ್ವಕರ್ಮ ಜನಾಂಗದವರು ಈ ಕಲೆಯನ್ನು ಪ್ರಾಚೀನವಾಗಿ ಆರಾಧಿಸಿಕೊಂಡು ಬಂದಿದ್ದಾರೆ. ಕಲಾರಾಧನೆಯ ವೃತ್ತಿಯನ್ನು ಅವಲಂಭಿಸಿಕೊಂಡು ಬಂದಿರುವ ವಿಶ್ವಕರ್ಮ ಜನಾಂಗಕ್ಕೆ ಈವರೆಗೂ ಸಮರ್ಪಕ ರಾಜಕೀಯ ಪ್ರಾತಿನಿಧ್ಯ ದೊರಕಿಸಿಕೊಡಲು ಸಾಧ್ಯಗಾವದೇ ಇರುವುದಕ್ಕೆ ವಿಷಾಧವಿದೆ. ಈ ಬಾರಿ ಇತರ ಸಮುದಾಯದ ಜೊತೆಗೆ ವಿಶ್ವಕರ್ಮ ಜನಾಂಗಕ್ಕೂ ವಿಶೇಷ ಪ್ರಾತಿನಿಧ್ಯ ನೀಡಲಾಗುವುದು ಮತ್ತು ವಿಶ್ವಕರ್ಮ ಸಮುದಾಯದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಕಾಪು ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.


ಪೆರ್ಡೂರು ಬುಕ್ಕಿಗುಡ್ಡೆ ಕೈರ್‌ ವಿಶ್ವಕರ್ಮ ಸಭಾಭವನದ ಸಮೀಪ ನಡೆದ ಪ್ರಚಾರ ಸಭೆಯಲ್ಲಿ ವಿಶ್ವಕರ್ಮ ಸಮಾಜದ ಬಾಂಧವರನ್ನುದ್ದೇಶಿಸಿ ಅವರು ಮಾತನಾಡಿದರು.


ಹಿಂದಿನ ಬಿಜೆಪಿ ಸರಕಾರ ವಿಶ್ವಕರ್ಮ ಸಮಾಜದವರನ್ನು ಓಟ್‌ ಬ್ಯಾಂಕ್‌ ಆಗಿ ಮಾತ್ರ ಬಳಸಿಕೊಂಡಿದೆ. ಬಿಜೆಪಿ ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಕೊಡುತ್ತೇವೆ, ಅನುದಾನವನ್ನು ಕೊಡುತ್ತೇವೆ ಎಂದು ಪ್ರತೀ ಚುನಾವಣೆಯಲ್ಲೂ ಹೇಳಿಕೊಂಡು ಬರುತ್ತಿದೆ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಆನೆಗುಂದಿ ಮಹಾಸಂಸ್ಥಾನಕ್ಕೆ ಸರಕಾರದ ಮೂಲಕ 50 ಲಕ್ಷ ರೂಪಾಯಿ ಅನುದಾನವನ್ನು ದೊರಕಿಸಿಕೊಟ್ಟಿದ್ದೇನೆ. ಈ ಬಾರಿ ಸಾಸಕನಾಗಿ ಆಯ್ಕೆಯಾದಲ್ಲಿ ಇನ್ನೂ ಬಹಳಷ್ಟು ಬೇಡಿಕೆಗಳನ್ನು ಈಡೇರಿಸುವುದರ ಜತೆಗೆ ಇತರ ಸಮುದಾಯಗಳಂತೆ ವಿಶ್ವಕರ್ಮ ಸಮುದಾಯಕ್ಕೂ ರಾಜಕೀಯ ಸಹಿತ ಎಲ್ಲಾ ಪ್ರಾತಿನಿಧ್ಯ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು.

ಕಾಂಗ್ರೆಸ್‌ ಪಕ್ಷದ ಮುಖಂಡರ ಸಹಿತವಾಗಿ ಸ್ಥಳೀಯ ವಿಶ್ವಕರ್ಮ ಮುಖಂಡರಾದ ಉಪೇಂದ್ರ ಆಚಾರ್‌, ವೆಂಕಟರಮಣ ಆಚಾರ್‌, ಭಾಸ್ಕರ ಆಚಾರ್‌ ಮೊದಲಾದವರು ಉಪಸ್ಥಿತರಿದ್ದರು.

ಧರ್ಮದ ವಿಚಾರವನ್ನು ರಾಜಕೀಯದ ಜೊತೆಗೆ ಬೆರೆಸುವುದು ಸರಿಯಲ್ಲ : ವಿನಯ್‌ ಕುಮಾರ್‌ ಸೊರಕೆ


ಕಾಪು ಕ್ಷೇತ್ರದಲ್ಲಿ ಇಂದಿಗೂ ಕಾಂಗ್ರೆಸ್‌ ಪಕ್ಷ ಬಲಿಷ್ಠವಾಗಿದೆ. ಕಾಪು ಕ್ಷೇತ್ರದ ಅಭಿವೃದ್ಧಿಗಾಗಿ ನಾವು 2013ರಲ್ಲೇ ಮುನ್ನುಡಿ ಬರೆದಿದ್ದು ನಮ್ಮ ಅವಧಿಯ ಐದು ವರ್ಷಗಳಲ್ಲಿ ನಡೆಸಿರುವ ಅಭಿವೃದ್ಧಿ ಯೋಜನೆಗಳ ಸಾಕ್ಷಿಗುಡ್ಡೆಗಳು ಜನತೆಯ ಮುಂದಿವೆ. ಅತಿಯಾದ ಬೆಲೆಯೇರಿಕೆಯಿಂದಾಗಿ ಜನಜೀವನ ತತ್ತರಿಸಿ ಹೋಗಿದೆ. ನಾವು ಅಭಿವೃದ್ಧಿ ಮತ್ತು ಬೆಲೆಯೇರಿಕೆ ಬಗ್ಗೆ ಮಾತನಾಡಿದರೆ ಬಿಜೆಪಿ ಜಾತಿ, ಧರ್ಮದ ಬಗ್ಗೆ ಮಾತನಾಡಿ ಜನರನ್ನು ಹಾದಿ ತಪ್ಪಿಸುತ್ತಿದೆ. ಬಿಜೆಪಿಯವರು ಧರ್ಮದ ವಿಚಾರವನ್ನು ರಾಜಕೀಯದ ಜೊತೆಗೆ ಬೆರೆಸುವುದು ಸರಿಯಲ್ಲ. ಬಿಜೆಪಿಯವರ ರಾಜಕೀಯ ಕುತಂತ್ರಗಳಿಗೆ ಮತದಾರರೇ ಸೂಕ್ತ ಉತ್ತರ ನೀಡುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿನಯ್‌ ಕುಮಾರ್‌ ಸೊರಕೆ ಹೇಳಿದ್ದಾರೆ.

Baravanige News

Adblock Detected!

Our website is made possible by displaying online advertisements to our visitors. Please consider supporting us by whitelisting our website.

You cannot copy content from Baravanige News

Scroll to Top