ಬೆಳ್ತಂಗಡಿ : ಕೊರಗಜ್ಜನ ಗುಡಿಗೆ ಬೆಂಕಿ : ಪ್ರಕರಣ ದಾಖಲು

ಬೆಳ್ತಂಗಡಿ : ಅನಾದಿ ಕಾಲದಿಂದ ಆಚರಿಸಿಕೊಂಡು ಬರುತ್ತಿದ್ದ ಕೊರಗಜ್ಜನ ಗುಡಿಗೆ ಕಿಡಿಗೇಡಿಗಳು ಬೆಂಕಿಯಿಟ್ಟಿರುವ ಘಟನೆ ಬೆಳ್ತಂಗಡಿ ತಾಲೂಕಿನ ಬಜಿರೆ ಗ್ರಾಮದ ಬಾಡಾರು ಕೊರಂಗಲ್ಲುವಿನಲ್ಲಿ ನಡೆದಿದ್ದು, ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೊರಗಕಲ್ಲು ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರದೀಪ್ ಕುಮಾರ್ ಹೆಗ್ಡೆ (47) ನೀಡಿದ ದೂರಿನ ಮೇರೆಗೆ ಹರೀಶ್ ಪೂಜಾರಿ, ಡಾ. ರಾಜೇಶ್, ರಮೇಶ್ ಕುಡ್ಮೇರು, ಓಂ ಪ್ರಕಾಶ್, ಪ್ರಶಾಂತ್ ಬಂಟ್ವಾಳ ರವರ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರದೀಪ್ ಕುಮಾರ್ ಹೆಗ್ಡೆ ರವರು ಬೆಳ್ತಂಗಡಿ ತಾಲೂಕು ಬಜಿರೆ ಗ್ರಾಮದ ಬಾಡಾರು ಕೊರಗಕಲ್ಲು ಶ್ರೀ ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಅದ್ಯಕ್ಷಕರಾಗಿದ್ದು, ಸದ್ರಿ ಕೊರಗಜ್ಜ ಕಟ್ಟೆಯು ಬಜಿರೆ ಗ್ರಾಮದ ಬಾಡಾರು ಎಂಬಲ್ಲಿ ಸರಕಾರಿ ಜಮೀನಿನಲ್ಲಿ ಇದ್ದುದನ್ನು ಊರಿನ ಹತ್ತು ಸಮಸ್ತರು ಸೇರಿಕೊಂಡು ಆರಾಧಿಸಿಕೊಂಡು ಬರುತ್ತಿದ್ದು, ಸದ್ರಿ ಕೊರಗಜ್ಜ ಕಟ್ಟೆಯನ್ನು ಹರೀಶ್ ಮತ್ತು ಇತರರು ಸೇರಿಕೊಂಡು ಊರಿನ ಸಾರ್ವಜನಿಕ ಭಕ್ತಾಧಿಗಳಿಗೆ ತಿಳಿಸದೆ ತಮ್ಮ ಸ್ವಂತ ಸ್ಥಳಕ್ಕೆ ಕೊಂಡು ಹೋಗಿ ಪ್ರತಿಷ್ಠಾಪನೆ ಮಾಡಿದ್ದು, ತದನಂತರ ಡಾ. ರಾಜೇಶ್ ಮತ್ತಿತ್ತರರು 11-06-2023 ರಂದು ವಿವಾದಿತ ಕೊರಗಜ್ಜಕಟ್ಟೆಯನ್ನು ಕೆಡವಿ ಹೊಸದಾಗಿ ಕೆಸರು ಕಲ್ಲು ಹಾಕಲು ಯತ್ನಿಸಿದ್ದು, ಆ ಸಮಯ ಪ್ರದೀಪ್ ಮತ್ತು ಇತರ ಭಕ್ತಾಧಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದು , ಡಾ. ರಾಜೇಶ್ ರವರು ಅವರ ಸ್ವಂತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡಿದ ಬಳಿಕ ಹಳೆಯ ಕೊರಗಜ್ಜ ಕಟ್ಟೆಯನ್ನು ಪ್ರದೀಪ್ ಮತ್ತು ಇತರ ಸಾರ್ವಜನಿಕ ಭಕ್ತರು ಚಪ್ಪರ ಹಾಕಿ ಆರಾಧಿಸಿಕೊಂಡು ಬರುತ್ತಿದ್ದರು.

ಜು.11 ರಂದು ಹರೀಶ್ ಪೂಜಾರಿ ಎಂಬವರು ಇತರ ಆರೋಪಿತರಾದ ಡಾ.ರಾಜೇಶ್ , ರಮೇಶ್ ಕುಡ್ಮೇರು, ಓಂ ಪ್ರಕಾಶ್, ಮತ್ತು ಪ್ರಶಾಂತ್ ಬಂಟ್ವಾಳರವರ ಕುಮ್ಮಕ್ಕಿನಿಂದ ಚಪ್ಪರಕ್ಕೆ ಬೆಂಕಿ ಕೊಟ್ಟು ಆರಾಧನಾ ಕೇಂದ್ರಕ್ಕೆ ಹಾನಿ ಉಂಟು ಮಾಡಿ ಸಾರ್ವಜನಿಕ ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟುಮಾಡಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ 39/2023 ಕಲಂ: 295(A) ,436,109 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Scroll to Top