ಬೆಂಗಳೂರು, ಜು.19: ರಾಜ್ಯದಲ್ಲಿ ವಿಧ್ವಂಸಕ ಕೃತ್ಯಕ್ಕೆ ತಯಾರಿ ನಡೆಸಿದ್ದ ಆರೋಪದಲ್ಲಿ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರನ್ನು ಉಮರ್, ಸುಹೇಲ್, ತಬ್ರೇಜ್, ಫೈಜಲ್ ರಬಾನಿ, ಮುದಾಸಿರ್ ಎಂದು ಗುರುತಿಸಲಾಗಿದ್ದು, ಜುನೈದ್ ಎಂಬಾತ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಬಂಧಿತರು ಮತ್ತು ಇನ್ನು ಕೆಲವರು ಆರ್ ಟಿ ನಗರ ಕೊಲೆ ಕೇಸ್ ಒಂದರಲ್ಲಿ ಜೈಲಿಗೆ ಹೋಗಿದ್ದರು. ಈ ಕೇಸ್ ನಲ್ಲಿ ಇದ್ದ ಆರೋಪಿಗಳು ಜೈಲಿನಲ್ಲಿ ಉಗ್ರರ ಜೊತೆಗೆ ಸಂಪರ್ಕ ಬೆಳೆಸಿದ್ದರು. ನಂತರ ಬೆಂಗಳೂರು ಮತ್ತು ಕೆಲವೆಡೆ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸಿದ್ದರು. ಮಾತ್ರವಲ್ಲದೆ, ಶಂಕಿತರು ಕೃತ್ಯಕ್ಕೆ ಬೇಕಾಗುವ ರಾ ಮೆಟೀರಿಯಲ್ಸ್ ಗಳನ್ನು ಒಗ್ಗೂಡಿಸುತ್ತಿದ್ದರು ಎಂಬ ಮಾಹಿತಿಯನ್ನು ಕೂಡ ಕೇಂದ್ರ ಸಿಸಿಬಿ ಪೊಲೀಸರು ಸಂಗ್ರಹಿಸಿದ್ದರು. ಈ ಮಾಹಿತಿ ಅನ್ವಯ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರ್ ಟಿ ನಗರ, ಹೆಬ್ಬಾಳ ಡಿಜೆಹಳ್ಳಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ಐವರು ಶಂಕಿತರು ಮಾತ್ರವಲ್ಲದೆ, ಇನ್ನು ಹಲವಾರು ಜನರು ಕೃತ್ಯದಲ್ಲಿ ಭಾಗಿಯಾಗಲು ತಯಾರಿ ನಡೆಸಿದ್ರು ಎನ್ನುವ ಮಾಹಿತಿ ಸಿಸಿಬಿ ಲಭ್ಯವಾಗಿದೆ. ಸದ್ಯ ಉಗ್ರರ ಪ್ಲಾನ್ ಅನ್ನು ಕಾರ್ಯರೂಪಕ್ಕೆ ತರದಂತೆ ಪೊಲೀಸರು ತಡೆದಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್ ದಾಖಲು.