ವಿದ್ಯುತ್ ಬಿಲ್ ನೌಕರನ ಕೊಲೆಗೆ ಯತ್ನ : ಆರೋಪಿ ಬಂಧನ



ಹುಬ್ಬಳ್ಳಿ : ಹೆಸ್ಕಾಂ ನೌಕರನು ವಿದ್ಯುತ್ ಬಿಲ್ ನೀಡಲು ತೆರಳಿದ್ದ ಸಂದರ್ಭ ಆತನ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ ಘಟನೆ ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಬ್ದುಲ್ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.

ಆರೋಪಿ ಅಬ್ದುಲ್ ಕಳೆದ ಮೂರು ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡದೇ ಬಾಕಿ ಉಳಿಸಿಕೊಂಡಿದ್ದ.

ಹೀಗಾಗಿ ಈ ತಿಂಗಳ ಬಿಲ್ 5 ಸಾವಿರ ರೂ.ಗಿಂತ ಅಧಿಕ ಬಂದಿತ್ತು ಎನ್ನಲಾಗಿದೆ.

ಅಲ್ಲದೇ ವಿದ್ಯುತ್ ಬಳಕೆ 200 ಯೂನಿಟ್‍ಗಿಂತ ಹೆಚ್ಚು ಬಳಕೆ ಮಾಡಿದ್ದ ಹಿನ್ನೆಲೆ ಗೃಹ ಜ್ಯೋತಿ ಯೋಜನೆಯ ಉಪಯೋಗ ಪಡೆಯಲು ಸಾಧ್ಯವಾಗಿಲ್ಲ.

ಇದರಿಂದ ಕೋಪಗೊಂಡ ಅಬ್ದುಲ್ ಬಿಲ್ ನೀಡಲು ಹೋದ ಮಲ್ಲಯ್ಯ ಗಣಾಚಾರಿ ಎಂಬ ನೌಕರನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ, ಬಳಿಕ ಮನಬಂದಂತೆ ಥಳಿಸಿದ್ದಾನೆ.

ಬಳಿಕ ಸ್ಥಳೀಯರು ನೌಕರ ಮಲ್ಲಯ್ಯನನ್ನು ರಕ್ಷಣೆ ಮಾಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತೀವ್ರ ಗಾಯಗೊಂಡಿರುವ ಮಲ್ಲಯ್ಯನಿಗೆ ಚಿಕಿತ್ಸೆ ನೀಡಲಾಗಿದೆ.

ಈ ಕುರಿತು ಅಶೋಕನಗರ ಪೊಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

Scroll to Top