ಚಪ್ಪಲಿ ಹೊಲಿಯುವ ಕಾರ್ಮಿಕನಿಗೆ ಬಂತು ದೆಹಲಿ ಗಣರಾಜ್ಯೋತ್ಸವಕ್ಕೆ ಆಹ್ವಾನ

ಕುಂದಾಪುರ : 2024ರ ಗಣರಾಜ್ಯೋತ್ಸವಕ್ಕೆ ಕುಂದಾಪುರದ ಬೀದಿ ಬದಿಯ ಚಪ್ಪಲಿ ರಿಪೇರಿ ಕಾರ್ಮಿಕನೊಬ್ಬನಿಗೆ ದೇಶದ ಪ್ರಧಾನಿ ನರೇಂದ್ರ ಮೋದಿ ಆಹ್ವಾನಿಸಿದ್ದಾರೆ. ಆ ಮೂಲಕ ಸಮಾಜದ ಕಟ್ಟಕಡೆಯ ಕಾರ್ಮಿಕನಿಗೂ ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವವನ್ನು ಕಣ್ಣುತುಂಬಿಸಿಕೊಳ್ಳುವ ಅವಕಾಶ ಬಂದಿದೆ.

ಹೌದು. ಕುಂದಾಪುರದ ಶಾಸ್ತ್ರೀ ವೃತ್ತದ ಸಮೀಪ ಕಳೆದ ಎರಡೂವರೆ ದಶಕಗಳಿಂದ ಚಪ್ಪಲಿ, ಕೊಡೆ ರಿಪೇರಿ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ಮಣಿಕಂಠ ಎಂಬುವರೇ ಮುಂದಿನ ಬಾರಿಯ ಗಣರಾಜ್ಯೋತ್ಸವದಲ್ಲಿ ಭಾಗವಹಿಸುವ ಅವಕಾಶ ಗಿಟ್ಟಿಸಿಕೊಂಡವರು.

ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಶಾಸ್ತ್ರೀ ಸರ್ಕಲ್‌ನಲ್ಲಿ ಲಿಡ್ಕರ್‌ನ ಪಾದರಕ್ಷೆ ರಿಪೇರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲಿ ದುಡಿಯುತ್ತಿರುವ ಮಣಿಕಂಠ ಅವರನ್ನು ಈ ಬಾರಿ ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿರುವ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಮೂಲತಃ ಭದ್ರಾವತಿಯವರಾದ ಅವರ ಅಜ್ಜ ಮುನುಸ್ವಾಮಿ ಸುಮಾರು 50 ವರ್ಷಗಳ ಹಿಂದೆ ಇಲ್ಲಿಗೆ ಬಂದು ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಆರಂಭಿಸಿದರು. ಸ್ವಲ್ಪ ಸಮಯ ಮಣಿಕಂಠ ಅವರ ತಂದೆ ಇದನ್ನು ಮುಂದುವರಿಸಿದರು, ಅವರ ಅನಾರೋಗ್ಯದ ಮಣಿಕಂಠ ಈ ಕುಲಕಸುಬನ್ನು ಮುನ್ನಡೆಸುತ್ತಿದ್ದಾರೆ.

ನಾನು ಸಾಮಾನ್ಯ ಜನರು ಮಾಡುವ ಕೆಲಸವನ್ನು ಮಾಡಿದ್ದೇನೆ. ನನ್ನ ಜವಾಬ್ದಾರಿ ಅದು. ಸರ್ಕಾರ ನಮ್ಮನ್ನು ಗುರುತಿಸಿರುವುದು ನಿಜಕ್ಕೂ ಸಂತೋಷವಾಗಿದೆ. ಇದರಿಂದ ನನ್ನ ಜವಾಬ್ಧಾರಿ ಹೆಚ್ಚಾಗಿದೆ ಎಂದು ಹೇಳಿದ್ದಾರೆ‌.

Scroll to Top