ಅಪ್ಪಿತಪ್ಪಿ ಪ್ರಾಣಿಗಳ ಈ ವಸ್ತು ನಿಮ್ಮಲ್ಲಿದ್ದರೆ ಕೂಡಲೇ ಅರಣ್ಯ ಇಲಾಖೆಗೆ ನೀಡಿ – ನಿಯಮ ಪಾಲಿಸದಿದ್ದರೆ ಜೈಲೂಟ ಗ್ಯಾರಂಟಿ

ಸ್ಯಾಂಡಲ್‌ ವುಡ್‌ನಲ್ಲಿ ಹುಲಿ ಉಗುರಿನ ಬೇಟೆ ಶುರುವಾಗಿದ್ದು, ಈಗಾಗಲೇ ನಟ ದರ್ಶನ್, ಜಗ್ಗೇಶ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಹಾಗೂ ಯುವ ರಾಜಕಾರಣಿ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಶೋಧ ಕಾರ್ಯ ನಡೆದಿದೆ.

ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಹುಲಿ ಉಗುರು ಪೆಂಡೆಂಟ್ ಧರಿಸಿ ಸದ್ಯ ಪೊಲೀಸರ ಅತಿಥಿಯಾಗಿದ್ದಾರೆ. ಈ ಪ್ರಕರಣದ ಬೆನ್ನಲ್ಲೇ ಕನ್ನಡದ ಖ್ಯಾತ ನಟರು ಹಾಗೂ ರಾಜಕಾರಣಿಗಳ ಹೆಸರು ಮುನ್ನೆಲೆಗೆ ಬಂದಿತ್ತು. ಲಾಕೆಟ್ ಧರಿಸಿರುವ ಪೋಟೋಗಳನ್ನು ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಧರಿಸಿರಬಹುದು ಅಂತ ಒಂದು ವರ್ಗ ಹೇಳ್ತಿದರೆ, ಮತ್ತೊಂದು ವರ್ಗ ಸ್ಟಾರ್ ನಟರ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದೆ ಈ ನಡುವೆ ಅರಣ್ಯ ಇಲಾಖೆ ವನ್ಯಜೀವ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಕ್ರಮಕ್ಕೆ ಮುಂದಾಗಿದೆ.

ಹಾಗಾದರೆ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳುವ ಬಗ್ಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ಯಲ್ಲಿ ಏನಿದೆ? ನಿಯಮ ಪಾಲಿಸದಿದ್ದರೆ ಏನೆಲ್ಲಾ ಶಿಕ್ಷೆಗೆ ಇದೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಸತ್ತ ಪ್ರಾಣಿಗಳ ವಸ್ತು ಬಳಕೆಗೆ ಪರವಾನಗಿ ಅತ್ಯಗತ್ಯ

ಸತ್ತ ಕಾಡು ಪ್ರಾಣಿಗಳ ವಸ್ತುಗಳನ್ನು ಇಟ್ಟುಕೊಳ್ಳಬೇಕು ಅಂದರೆ ವನ್ಯ ಸಂರಕ್ಷಣ ಇಲಾಖೆಯಿಂದ ಪರವಾನಗಿ ಪಡೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಲೈಸೆನ್ಸ್ ಇಲ್ಲದಿದ್ರೆ ಸೆಕ್ಷನ್ 12ರ ಪ್ರಕಾರ ವನ್ಯಜೀವಿ ಅಧಿಕಾರಿಗಳ ಬಳಿ ವಿಶೇಷ ಅನುಮತಿಗೆ ಅವಕಾಶ ಇರುತ್ತದೆ. ವನ್ಯ ಜೀವಿಗೆ ಸಂಬಂಧಿಸಿದ ದೇಹದ ಅಂಗಾಂಗ ಸರ್ಕಾರಕ್ಕೆ ಸೇರುತ್ತದೆ. ಈ ಕಾರಣಕ್ಕಾಗಿ ವನ್ಯಜೀವಿಗಳ ದೇಹದ ವಸ್ತುಗಳನ್ನು ಬಳಸಬಾರದು. ಸತ್ತ ಆನೆಗಳ ಯಾವ ಅಂಗಾಂಗಳನ್ನು ಇಟ್ಟುಕೊಳ್ಳೋಕೆ ಅವಕಾಶವಿಲ್ಲ. ಒಂದ್ವೇಳೆ ಆನೆ ಸತ್ತರೆ ಉಗುರು, ಕೂದಲು, ದಂತಗಳನ್ನು ಬಳಸಬಾರದು.

ನಿಯಮ ಮರೆತು ಬಳಕೆ ಮಾಡಿದ್ರೆ ವನ್ಯಜೀವ ಕಾಯ್ದೆ ಪ್ರಕಾರ ಶಿಕ್ಷೆ ಆಗಲಿದೆ. ಆನೆ ಸತ್ತರೆ ಅದನ್ನು ಹೂಳಬಾರದು, ಸತ್ತ ಆನೆಯ ಕಳೇಬರ ಸುಡಲೇಬೇಕು. ಆನೆ ದೇಹ ಸಂಪೂರ್ಣವಾಗಿ ಸುಟ್ಟು ಹೋಗೋವರೆಗೆ ನಿಗಾ ಇಡಬೇಕು. ಆನೆ ದೇಹ ಸುಟ್ಟ ನಂತರ ಅದರ ಮೂಳೆಗಳನ್ನ ನೀರಿನಲ್ಲಿ ಬಿಡಬೇಕು ಎಂದು ನಿಯಮ ಹೇಳುತ್ತದೆ.

ನವಿಲನ್ನು ಸಾಯಿಸಿದರೆ ಶಿಕ್ಷೆ ಕಟ್ಟಿಟ್ಟ ಬುತ್ತಿ

ವನ್ಯಜೀವಿ ಅಂಗಾಗಗಳನ್ನು ಹೊಂದುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಕಲಂ 9, 19, 40, 42, 44, 48 ಎ, 49ಎ, 49ಬಿ, 51:52 58 ರ ಪ್ರಕಾರ ಅಪರಾಧವಾಗಿದೆ. ಇದರಂತೆ, ಸತ್ತ ಹುಲಿಯ ಯಾವ ಭಾಗಗಳನ್ನೂ ಇಟ್ಟುಕೊಳ್ಳಲು ಕಾನೂನಿನಡಿ ಅವಕಾಶವಿಲ್ಲ.

ಇನ್ನೂ ಮೃತಪಟ್ಟ ಜಿಂಕೆಯ ಸತ್ತ ಭಾಗಗಳನ್ನು ಇಟ್ಟುಕೊಳ್ಳುವ ಅವಕಾಶವಿಲ್ಲ. ಈಚೆಗೆ ಜಿಂಕೆಗಳ ಕೊಂಬುಗಳನ್ನು ಗೋಡೆಯ ಮೇಲೆ ಹಾಕಿರುವುದನ್ನು ಕಾಣಬಹುದು. ಅದಕ್ಕೂ ವಲಯದ ಅರಣ್ಯ ಅಧಿಕಾರಿಗಳಿಂದ ಅನುಮತಿ ಕಡ್ಡಾಯ. ಅನುಮತಿ ಇಲ್ಲದಿದ್ದರೆ ಕಾನೂನು ರೀತಿಯಲ್ಲಿ ಕ್ರಮ ಎದುರಿಸಬೇಕಾಗುತ್ತದೆ. ನವಿಲು ಗರಿಯನ್ನು ಇಟ್ಟುಕೊಳ್ಳುವುದಕ್ಕೆ ಅವಕಾಶ ಇದೆ. ಆದರೆ ನವಿಲನ್ನು ಹತ್ಯೆ ಮಾಡಿ ಗರಿಗಳನ್ನು ಇಟ್ಕೊಳ್ಳುವಂತಿಲ್ಲ.

ಯಾವುದೇ ವನ್ಯಜೀವಿಯನ್ನು ಕೊಂದರೆ ಮೂರು ವರ್ಷ ಶಿಕ್ಷೆ:

ಯಾವುದೇ ವನ್ಯ ಪ್ರಾಣಿಗಳನ್ನು ಕೊಂದರೆ ಮೂರು ವರ್ಷ ಶಿಕ್ಷೆ ಅಂತ ಕಾಯ್ದೆಯಲ್ಲಿ ಉಲ್ಲೇಖವಾಗಿದೆ.

ಮೃತ ಹುಲಿಯ ಅಂಗಾಗಗಳಿಗಿದೆ ಭಾರೀ ಬೇಡಿಕೆ:

ಮೃತ ಹುಲಿಯ ಅಂಗಾಂಗಳಿಗೆ ಮಾರುಕಟ್ಟೆಯಲ್ಲಿ ಸಾಕಷ್ಟು ಬೇಡಿಕೆ ಇದೆ. ಹಾಗೆಂದು ಹುಲಿ ಚರ್ಮ, ಉಗುರು, ಕೂದಲುಗಳನ್ನು ಬಳಸಿದರೆ 3 ವರ್ಷ ಜೈಲು ಖಂಡಿತ. ಆನೆಗಳ ವಿಚಾರವಾಗಿ ವಿಶೇಷವಾದಂತಹ ಯಾವ ಕಾಯ್ದೆಯೂ ಇಲ್ಲ. ಹುಲಿಗೆ ಅನುಸರಿಸಲಾಗುವ ಕಾಯ್ದೆಯೇ ಆನೆಗಳಿಗೂ ಅನ್ವಯಿಸುತ್ತದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಏನು ಹೇಳುತ್ತೆ?

ಯಾವುದೇ ವನ್ಯ ಜೀವಿಗೆ ಸಂಬಂಧಿಸಿದ ವಸ್ತುಗಳು ಚರ್ಮ, ಮೂಳೆ, ಕೊಂಬು, ಕೂದಲು ಇತ್ಯಾದಿ ವಸ್ತುಗಳ ಸಂಗ್ರಹಿಸುವುದು ತಪ್ಪಾಗುತ್ತದೆ. ಒಂದು ವೇಳೆ ಇದ್ದರೆ ಅರಣ್ಯ ಇಲಾಖೆಯಿಂದ ಪ್ರಮಾಣ ಪತ್ರ ಹೊಂದಿರಬೇಕು. ಇಲ್ಲದಿದ್ದರೆ 3 ರಿಂದ 7 ವರ್ಷ ಜೈಲು ಮತ್ತು ಕನಿಷ್ಠ 10,000 ರೂ ದಂಡ ವಿಧಿಸುವ ಸಾಧ್ಯತೆ ಇದೆ.

Scroll to Top